ರಿಪ್ಪನ್ಪೇಟೆ: ದಾನದಲ್ಲಿ ಶ್ರೇಷ್ಟವಾದುದ್ದು ರಕ್ತದಾನ. ರಕ್ತದಾನದಿಂದ ಇನ್ನೊಬ್ಬರ ಜೀವವನ್ನು ಉಳಿಸಬಹುದು ಎಂದು ಆನಂದಪುರ ಮುರುಘಾರಾಜೇಂದ್ರಮಠದ ಡಾ.ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಮಹಾಸ್ವಾಮಿಜಿ ಹೇಳಿದರು.
ಸದಾನಂದ ಶಿವಯೋಗಾಶ್ರಮದ ಮೂಲೆಗದ್ದೆಮಠದಲ್ಲಿ ರೋಟರಿ ಕ್ಲಬ್ ಲಿಂ. ಸಿದ್ದಲಿಂಗ ಮಹಾಶಿವಯೋಗಿಗಳವರ ಪುಣ್ಯಸ್ಮರಣೆ ಅಂಗವಾಗಿ ಆಯೋಜಿಸಲಾದ “ರಕ್ತದಾನ ಶಿಬಿರ ಮತ್ತು ಆಯುರ್ವೇದ” ತಪಾಸಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ದಿವ್ಯಸಾನಿಧ್ಯ ಆಶೀರ್ವಚನ ನೀಡಿ, ರಕ್ತದಾನ ಆರೋಗ್ಯಕ್ಕೆ ಪೂರಕವೇ ಹೊರತು ಮಾರಕವಲ್ಲ. ಯುವಕರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡುವುದರಿಂದ ಅಮೂಲ್ಯವಾದ ಜೀವ ಉಳಿಯುತ್ತದೆ. ದುಶ್ಚಟಗಳನ್ನು ಮಾಡುವುದರ ಬದಲು ರಕ್ತದಾನ ಮಾಡುವುದು ಉತ್ತಮ.
ಇತ್ತೀಚಿನ ದಿನಗಳಲ್ಲಿ ರಕ್ತದ ಆವಶ್ಯಕತೆ ಹೆಚ್ಚಾಗಿದ್ದು ಮಾನವನ ಅಂಗಾಂಗಗಳ ದಾನವನ್ನು ಸಹ ದಾನ ಮಾಡುತ್ತಿದ್ದು ಕಣ್ಣು ಮತ್ತು ರಕ್ತದಾನ ಕಿಡ್ನಿದಾನದಂತಹ ದಾನ ಮಾಡುವುದರಿಂದ ಇನ್ನೊಬ್ಬರಿಗೆ ಸಹಕಾರಿಯಾಗುವುದೆಂದು ಹೇಳಿ, ಆರೋಗ್ಯವಂತ ಮನುಷ್ಯ ಮೂರು ಬಾರಿ ತಿಂಗಳಿಗೊಮ್ಮೆ, ಮಹಿಳೆಯರು ನಾಲ್ಕು ತಿಂಗಳಿಗೊಂದು ಬಾರಿ ರಕ್ತದಾನ ಮಾಡಬಹುದೆಂದು ವೈದ್ಯರು ಹೇಳುತ್ತಿದ್ದು ಇದರಿಂದ ಹೃದಯ ಕಾಯಿಲೆ ಬಾರದೆಂದರು.
ಸದಾನಂದ ಶಿವಯೋಗಾಶ್ರಮ ಮೂಲೆಗದ್ದೆ ಮಠದ ಅಭಿನವ ಚನ್ನಬಸವ ಮಹಾಸ್ವಾಮಿಜಿ ಅಧ್ಯಕ್ಷತೆ ವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಗುತ್ತಲಕಲ್ಮಠದ ಪ್ರಭುಮಹಾಸ್ವಾಮಿಜಿ, ಜಡೆ ಮಠದ ಸಿದ್ಧವೃಷಬೇಂದ್ರ ಮಹಾಸ್ವಾಮಿಜಿ, ಸಾಗರ ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಹಕ್ರೆ ಮಲ್ಲಿಕಾರ್ಜುನ, ಹೊಸನಗರ ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯರಾದ ಬಿ.ಯುವರಾಜ್, ಚಂದ್ರಮೌಳಿಗೌಡ, ಜಯಶೀಲಪ್ಪಗೌಡರು, ಜಬಗೋಡು ಹಾಲಪ್ಪಗೌಡ, ಕಲ್ಯಾಣಪ್ಪಗೌಡ ಮತ್ತಿತರರು ಇದ್ದರು.