ಹೊಸನಗರ: ತಾಲ್ಲೂಕಿನ ಮಾವಿನಕೊಪ್ಪ ಸರ್ಕಲ್ ಸಾಗರ ರಸ್ತೆಯಲ್ಲಿ ಸುಮಾರು 70 ವರ್ಷದ ಬಾವಿ ಕಾಣೆಯಾಗಿದೆ. ಬಾವಿ ಕಾಣೆಯಾಗಿರುವ ಬಗ್ಗೆ ಈ ಹಿಂದೆ ಮಾಧ್ಯಮಗಳಲ್ಲಿ ಸುದ್ಧಿಯಾಗಿತ್ತು. ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿಗೆ ಅಲ್ಲಿನ ಗ್ರಾಮಸ್ಥರು ದೂರು ಸಲ್ಲಿಸಿದ್ದು ಗ್ರಾಮಸ್ಥರ ಮನವಿಯ ಮೇರೆಗೆ ತಕ್ಷಣ ಎಚ್ಚೆತ್ತುಕೊಂಡ ಎಂ ಗುಡ್ಡೆಕೊಪ್ಪ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಗ್ರಾಮ ಪಂಚಾಯತಿ ಸದಸ್ಯ ಮಹೇಂದ್ರರವರು ಬಾವಿಯ ಜಾಗ ಕಬಳಿಕೆಯ ಸುತ್ತ-ಮುತ್ತ ಕಲ್ಲುಕಂಬದ ಬೇಲಿ ಹಾಕಿ ಇದು ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯತಿಗೆ ಮೀಸಲಿಟ್ಟ ಜಾಗವೆಂದು ಬೋರ್ಡ್ ಹಾಕಿದ್ದರು ಆಗ ಅರ್ಧ ಬಾವಿಯನ್ನು ಮಾತ್ರ ಮುಚ್ಚಲಾಗಿತ್ತು ಒಂದೆರಡು ದಿನದ ಹಿಂದೆ ಜೆಸಿಬಿ ಬಳಸಿ ಪೂರ್ಣ ಬಾವಿಯನ್ನು ಮುಚ್ಚಿ ಗ್ರಾಮ ಪಂಚಾಯತಿ (ಬಾವಿಯ ಜಾಗ) ಜಾಗದಲ್ಲಿ ಮಣ್ಣು ಹಾಕಿ ಗ್ರಾಮ ಪಂಚಾಯತಿಯ ಬೇಲಿಯನ್ನು ಕಿತ್ತು ಮನೆಯ ಮಾಲೀಕರು ಓಡಾಟ ಮಾಡುವ ವ್ಯವಸ್ಥೆ ಮಾಡಿಕೊಂಡಿದ್ದಾರೆ.
ಸರ್ಕಾರಿ ಜಾಗ ಕಬಳಿಕೆಗೆ ಬಿಡುವುದಿಲ್ಲ:
ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯತಿಯ ಈ ಭಾಗದ ಸದಸ್ಯ ಮಹೇಂದ್ರರವರು ಪತ್ರಿಕಾ ಹೇಳಿಕೆ ನೀಡಿ, ಯಾವುದೇ ಕಾರಣಕ್ಕೂ ಗ್ರಾಮ ಪಂಚಾಯತಿ ಸರ್ಕಾರಿ ಜಾಗವನ್ನು ಕಬಳಿಕೆಗೆ ಬಿಡುವುದಿಲ್ಲ. 75 ವರ್ಷದ ಹಿಂದಿನ ಬಾವಿಯಾಗಿದ್ದರೂ ಈ ಬಾವಿಯಲ್ಲಿ ನೀರಿರಲಿಲ್ಲ. ಈ ಗ್ರಾಮ ಪಂಚಾಯತಿಯ ಜಾಗದಲ್ಲಿ ಯಾವುದಾದರೂ ಸರ್ಕಾರದ ಅನುದಾನ ತಂದು ಸಭಾಭವನ ಅಥವಾ ಮಾವಿನಕೊಪ್ಪದಲ್ಲಿ ಶೌಚಾಲಯ ನಿರ್ಮಾಣ ಅಥವಾ ಗ್ರಾಮ ಪಂಚಾಯತಿಗೆ ಅನುದಾನ ಬರುವಂತೆ ಬಾಡಿಗೆ ಕಟ್ಟಡ ನಿರ್ಮಿಸಲು ಗ್ರಾಮ ಪಂಚಾಯತಿ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಿ ಅಂತಿಮಗೊಳಿಸಲಾಗುವುದು ಎಂದು ತಿಳಿಸಿದರು.
ಮಾವಿನಕೊಪ್ಪ ಸುತ್ತಮುತ್ತ ನೀರಿಲ್ಲ, ಕ್ರಮ ಕೈಗೊಳ್ಳಿ :
ಎಂ.ಗುಡ್ಡೆಕೊಪ್ಪ ಗ್ರಾಮ ಪಂಚಾಯತಿಯ ಮಾವಿನಕೊಪ್ಪ ಸಾಗರ ರಸ್ತೆಯಲ್ಲಿರುವ 75 ವರ್ಷದ ಹಳೇಯ ಬಾವಿಯನ್ನು ಸಂಪೂರ್ಣ ಮುಚ್ಚಿದ್ದು ಸರಿಯಾದ ಕ್ರಮವಲ್ಲ ಎಂದು ಅಲ್ಲಿನ ಗ್ರಾಮಸ್ಥೆ ಸುಜಾತ ಸುರೇಶ್ ಹೇಳಿದ್ದು, ಇವತ್ತು ಸರ್ಕಾರಿ ಬಾವಿ ಮುಚ್ಚುತ್ತಾರೆ. ನಾಳೆ ದೊಡ್ಡ-ದೊಡ್ಡ ಕೆರೆಗಳನ್ನು ಮುಚ್ಚಿ ಭೂ ಕಬಳಿಕೆ ಮಾಡುತ್ತಾರೆ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿಗಳು ಗ್ರಾಮ ಪಂಚಾಯತಿ ಪಿಡಿಓ ಭೂ ಕಬಳಿಕೆದಾರರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು. ಸರ್ಕಾರಿ ಬಾವಿಯನ್ನು ಮುಚ್ಚಿದವರಿಂದ ಹೊಸ ಬಾವಿಯನ್ನು ತೆಗೆಸಿಕೊಡುವಂತೆ ಕ್ರಮ ಕೈಗೊಳ್ಳಬೇಕೆಂದರು.
ಕಾನೂನು ಕ್ರಮ:
ಸ್ಥಳಕ್ಕೆ ಆಗಮಿಸಿದ ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರವಿಕುಮಾರ್ ಈ ಸಂದರ್ಭದಲ್ಲಿ ಮಾತನಾಡಿ, ಸರ್ಕಾರಿ ಬಾವಿ ಮುಚ್ಚಿರುವುದು ಕಾನೂನಿನ ಅಡಿಯಲ್ಲಿ ಕೇಸು ದಾಖಲಿಸಬಹುದಾಗಿದ್ದು ಮೇಲಾಧಿಕಾರಿಗಳ ಗಮನಕ್ಕೆ ತಂದು ಸರ್ಕಾರಿ ಬಾವಿಯನ್ನು ಮುಚ್ಚಿರುವ ಸ್ಥಳದಲ್ಲಿಯೇ ತೆರೆಯಲು ಸೂಚಿಸುವಂತೆ ಗ್ರಾಮ ಪಂಚಾಯತಿಯಿಂದ ನೋಟಿಸ್ ಜಾರಿಗೊಳಿಸಲಾಗುವುದು. ಈ ಬಾವಿಯ ಜಾಗದ ಸುತ್ತಮುತ್ತ ನಾಳೆಯೇ ತಂತಿ ಬೇಲಿ ಅಥವಾ ಕಾಂಪೌಂಡ್ ನಿರ್ಮಿಸಲಾಗುವುದು. ಯಾವುದೇ ಕಾರಣಕ್ಕೂ ಸರ್ಕಾರಿ ಜಾಗ ಕಬಳಿಕೆ ಬಿಡುವುದಿಲ್ಲ ಎಂದರು.