ರಿಪ್ಪನ್ಪೇಟೆ : ಇಂದು ಲೋಕಸಭಾ ಚುನಾವಣೆಗೆ 2ನೇ ಹಂತದಲ್ಲಿ ಮತದಾನ ನಡೆದಿದೆ. ಬೆಳಿಗ್ಗೆಯಿಂದ ಹುಮ್ಮಸ್ಸಿನಿಂದಲೇ ಮತದಾರರು ಮತಗಟ್ಟೆಗೆ ಆಗಮಿಸಿ ತಮ್ಮ ಮತವನ್ನು ಚಲಾಯಿಸುತ್ತಿದ್ದಾರೆ.
ಬೆಳಗ್ಗೆ ಮತದಾರರು ಮತಗಟ್ಟೆಯಲ್ಲಿ ಸರತಿ ಸಾಲಿನಲ್ಲಿ ಉತ್ಸುಕರಾಗಿ ನಿಂತು ತಮ್ಮ ಮತ ಚಲಾಯಿಸಿದ ದೃಶ್ಯ ಸಾಮಾನ್ಯವಾಗಿತ್ತು.
ರಣ ಬಿಸಿಲ ಕಾರಣ ಮತದಾರರು ತಂಪಾದ ಸಮಯದಲ್ಲಿ ಮತಹಾಕಿ ಮನೆ ಸೇರಿಕೊಂಡರಾಯಿತು ಎಂದು ಮುಂಜಾನೆಯೇ ವಯೋವೃದ್ದರು, ಮಹಿಳೆಯರು, ಯುವ ಮತದಾರರು ಸರತಿ ಸಾಲಿನಲ್ಲಿ ಮತಗಟ್ಟೆಯಲ್ಲಿ ನಿಂತು ಮತದಾನ ಮಾಡಿ ಮತಹಾಕಿದ ಬಗ್ಗೆ ತಮ್ಮ ಬೆರಳನ್ನು ಎತ್ತಿ ಹಿಡಿದುಕೊಂಡು ಹೊರಬರುತ್ತಿದ್ದುದ್ದು ವಿಶೇಷವಾಗಿತ್ತು.
ಇಲ್ಲಿನ ಬರುವೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮೂರು ಮತಗಟ್ಟೆಗಳಿದ್ದು ಈ ಎಲ್ಲ ಮತದಾನ ಕೇಂದ್ರದಲ್ಲಿ ಮತದಾನ ಮಾಡಲು ಬಂದು ಹೋಗುವವರನ್ನು ರಾಷ್ಟ್ರೀಯ ಪಕ್ಷದ ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರುಗಳು ಹಸ್ತಲಾಘವ ಮಾಡಿ ಶುಭಕೋರುತ್ತಿದ್ದರು.
ಇನ್ನೂ ಪಕ್ಷೇತರ ಅಭ್ಯರ್ಥಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪನವರ ಕಡೆಯವರು ನಾವುಗಳು ಏನು ಕಡಿಮೆ ಎಂಬಂತೆ ಮತದಾನಕ್ಕೆ ಬರುವವರನ್ನು ಸ್ವಾಗತಿಸಿ ತಮ್ಮ ಪರ ಮತ ಮಾಡಲು ಪ್ರೇರೇಪಿಸುತ್ತಿರುವುದು ಕಂಡು ಬಂದಿತು.