ಹೊಸನಗರ ; ಪ್ರತಿಯೊಬ್ಬರೂ ತನ್ನ ದುಡಿಮೆಯ ಒಂದು ಭಾಗವನ್ನು ಪರೋಪಕಾರಕ್ಕೆ ದಾನ ಮಾಡಿದಲ್ಲಿ ಮಾತ್ರವೇ ಕಲಿಯುಗದಲ್ಲಿ ಪುಣ್ಯ ಪ್ರಾಪ್ತಿಯಾಗುವುದೆಂದು ತಾಲೂಕಿನ ಮೂಲೆಗದ್ದೆ ಸದಾಶಿವ ಶಿವಯೋಗಶ್ರಮದ ಪೀಠಾಧ್ಯಕ್ಷ ಅಭಿನವ ಚನ್ನಬಸವ ಮಹಾಸ್ವಾಮೀಜಿ ತಿಳಿಸಿದರು.
ಪಟ್ಟಣದ ಮಾವಿನಕೊಪ್ಪ ಗ್ರಾಮದಲ್ಲಿ ಗ್ರಾಮಸ್ಥರು 3 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಶ್ರೀ ಗಂಗಾಧರೇಶ್ವರ ಹಾಗು ವಿವಿಧ ಪರಿವಾರ ದೇವರ ನೂತನ ದೇವಸ್ಥಾನಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಭಕ್ತಾದಿಗಳನ್ನು ಉದ್ದೇಶಿಸಿ ಆಶೀರ್ವಾಚನ ನೀಡಿದರು.
ಪ್ರತಿಯೊಬ್ಬರೂ ತಾವು ಗಳಿಸಿದನ್ನು ಸಕಾರ್ಯಗಳಿಗೆ ಬಳಸಬೇಕು. ಇಡೀ ವಿಶ್ವದಲ್ಲಿ ಭಕ್ತಿಗೆ ಒಲಿಯುವನು ಎಂದರೆ ದೇವರು ಮಾತ್ರವೇ. ಸದಾಚಾರ, ಸದ್ಭಕ್ತಿಯಿಂದಲೇ ದೈವಕೃಪೆ ಪ್ರಾಪ್ತಿಯ ಸನ್ಮಾರ್ಗವೆಂದರು.
ವೇದಿಕೆಯಲ್ಲಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಗಣೇಶ್, ಉದ್ಯಮಿ ಮಹೇಂದ್ರ, ಹಿರಿಯರಾದ ಶ್ರೀನಿವಾಸ್ ಕಾಮತ್, ಯುವ ರಾಜಕೀಯ ಮುತ್ಸದ್ದಿ ನಿತಿನ್ ನಾರಾಯಣ್, ಉದ್ಯಮಿ ಸುರೇಶ ಆಚಾರ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ದೇಗುಲ ನಿರ್ಮಾಣಕ್ಕೆ ದೇಣಿಗೆ ನೀಡಿದ ಅನೇಕರನ್ನು ದೇವಸ್ಥಾನ ಆಡಳಿತ ಸಮಿತಿ ಪರವಾಗಿ ಸ್ವಾಮೀಜಿ ಸನ್ಮಾನಿಸಿದರು. ಸುಜಾತಾ ಸುರೇಶ ಕಾರ್ಯಕ್ರಮ ನಿರೂಪಿಸಿದರು. ಗೌತಮ್ ಕುಮಾರ್ ಆಚಾರ್ಯ ವಂದಿಸಿದರು.







