ರಿಪ್ಪನ್ಪೇಟೆ ; ವ್ಯಕ್ತಿ ಜೀವಂತವಾಗಿದ್ದಾಗ ಮಾಡಿದ ಸಮಾಜಮುಖಿ ಕಾರ್ಯಗಳ ಬಗ್ಗೆ ಜನ ಮಾತನಾಡುವುದಿಲ್ಲ. ಅದೇ ಆತ ಮರಣ ಹೊಂದಿದಾಗ ಅವರು ಮಾಡಿದ ಸಾಮಾಜಿಕ ಸತ್ಕಾರ್ಯಗಳು ಮಾತನಾಡುವಂತೆ ಮಾಡುತ್ತವೆ ಎಂಬುದಕ್ಕೆ ಬೆಳಕೋಡು ಹಾಲಸ್ವಾಮಿಗೌಡರೇ ಸಾಕ್ಷಿಯಾಗಿದ್ದಾರೆಂದು ಶ್ರೀಶೈಲ ಜಗದ್ಗುರುಗಳು ಮತ್ತು ಆನಂದಪುರ ಮುರುಘಾರಾಜೇಂದ್ರ ಮಠದ ಜಗದ್ಗುರು ಹೇಳಿದರು.
ಇತ್ತೀಚೇಗೆ ನಿಧನರಾದ ರಿಪ್ಪನ್ಪೇಟೆ ಸಮೀಪದ ಬೆಳಕೋಡು ಗ್ರಾಮದ ಹಾಲಸ್ವಾಮಿಗೌಡರಿಗೆ ವೀರಶೈವ ಸಮಾಜ ಭಾಂದವರು ಮತ್ತು ಕುಟುಂಬದವರು ಆಯೋಜಿಸಲಾದ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ದೂರವಾಣಿಯಲ್ಲಿ ತಮ್ಮ ಆಶೀರ್ವಚನ ನೀಡಿ ಹಾಲಸ್ವಾಮಿಗೌಡರು ಸಮಾಜಕ್ಕೆ ದೊಡ್ಡ ಅಸ್ತಿ ಅವರ ಅಕಾಲಿಕ ನಿಧನದಿಂದ ವೀರಶೈವ ಸಮಾಜಕ್ಕೆ ತುಂಬಲಾರದಷ್ಟು ನಷ್ಟವಾಗಿದೆ. ಅವರ ಸೇವಾ ಕ್ಷೇತ್ರಗಳ ಬಗ್ಗೆ ಅವಲೋಕನ ಮಾಡಿದ ಉಭಯ ಜಗದ್ಗುರುಗಳು ಇಂದಿನ ಯುವ ಸಮೂಹ ಅವರ ಆದರ್ಶ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ತಿಳಿಸಿ, ಇದೊಂದು ಸಮಾಜದ ಅನರ್ಘ್ಯ ರತ್ನ ಮೇರು ಪರ್ವತವಿದ್ದಂತೆ ಎಂದು ಹೇಳಿದರು.
ಕೋಣಂದೂರು ಬೃಹನ್ಮಠದ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಜಿ ಮತ್ತು ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮ ಮಠದ ಅಭಿನವ ಚನ್ನಬಸವ ಮಹಾಸ್ವಾಮಿಜಿ ದಿವ್ಯಸಾನಿಧ್ಯವಹಿಸಿ ಆಶೀರ್ವಚನ ನೀಡಿ, ಜಾತಿಯ ಸಂಕೋಲೆಯಾಗಿ ಸಮಾಜದ ಸಂಘಟನೆಯೊಂದಿಗೆ ಕಷ್ಟ ನಷ್ಟದಲ್ಲಿರುವವರನ್ನು ಮೇಲೆತ್ತುವ ಮೂಲಕ ಮಠ ಮಂದಿರಗಳಿಗೆ ಸದಾ ತನುಮನ ಧನವನ್ನು ನೀಡುವ ಮೂಲಕ ಸಮಾಜಮುಖಿ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಮರೆಯಲಾರದ ಮಾಣಿಕ್ಯವಾಗಿ ಇಂದಿನ ಯುವ ಜನಾಂಗಕ್ಕೆ ಸ್ಪೋರ್ತಿಯ ಚಿಲುಮೆಯಂತಾಗಿದ್ದಾರೆಂದರು.
ಭಾವಪೂರ್ಣ ಶ್ರದ್ಧಾಂಜಲಿ ಸಭೆಯಲ್ಲಿ ವೀರಶೈವ ಸಮಾಜದ ಉಪಾಧ್ಯಕ್ಷ ಜಿ.ಎಂ.ದುಂಡರಾಜ್ಗೌಡ, ಜಿಲ್ಲಾ ಬಿಜೆಪಿ ಮುಖಂಡ ಟಿ.ಡಿ.ಮೇಘರಾಜ್, ಅಕ್ಷಯಸಾಗರ ಸೌಹಾರ್ಧ ಸಹಕಾರ ಬ್ಯಾಂಕ್ ಅಧ್ಯಕ್ಷ ಬಿ.ಜಿ.ದಿನೇಶ ಬರದವಳ್ಳಿ, ಕೋಣಂದೂರು ಉದ್ಯಮಿ ಕೆ.ಆರ್.ಪ್ರಕಾಶ್, ನ್ಯಾಯವಾದಿ ಎಂ.ಎನ್.ದಿನೇಶ,ಖೈರಾ ಕೆ.ಆರ್.ರಾಜು, ಗ್ರಾಮ ಪಂಚಾಯಿತ್ ಸದಸ್ಯ ಡಿ.ಈ.ಮಧುಸೂಧನ್, ರಶ್ಮಿ, ವಿನುತಾ ಇನ್ನಿತರರು ನುಡಿನಮನ ಸಲ್ಲಿಸಿದರು.