ಹಬ್ಬಗಳನ್ನು ಆತಂಕ ರಹಿತವಾಗಿ ಆಚರಿಸಬೇಕು ; ಶಿವಮೊಗ್ಗ ಡಿಸಿ ಗುರುದತ್ತ ಹೆಗಡೆ

Written by Malnadtimes.in

Published on:

WhatsApp Group Join Now
Telegram Group Join Now

SHIVAMOGGA ; ಹಬ್ಬಗಳನ್ನು ಎಲ್ಲರೂ ಸಡಗರ ಸಂಭ್ರಮದಿಂದ ಆತಂಕ ರಹಿತವಾಗಿ ಆಚರಿಸಬೇಕು ಎಂದು ಶಿವಮೊಗ್ಗ ಜಿಲ್ಲಾಧಿಕಾರಿ (Shivamogga DC) ಗುರದತ್ತ ಹೆಗೆಡೆ ತಿಳಿಸಿದರು.

ಅವರು ಸೋಮವಾರ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪೋಲಿಸ್ ಇಲಾಖೆ, ಮಹಾನಗರ ಪಾಲಿಕೆ ವತಿಯಿಂದ ಗಣೇಶ ಹಾಗೂ ಹಿದ್ ಮಿಲಾದ್ ಹಬ್ಬಗಳ ಪ್ರಯುಕ್ತ ಸರ್ವಧರ್ಮದ ಮುಖಂಡರ ಶಾಂತಿಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅವರು ಶಿವಮೊಗ್ಗ ಜಿಲ್ಲೆ ಅತ್ಯಂತ ಶಾಂತಿಪ್ರಿಯರು. ವಿಶ್ವಮಾನವ ಸಂದೇಶ ಸಾರಿದ ಕುವೆಂಪು ಜನ್ಮತಾಳಿದ ಜಿಲ್ಲೆಯಾಗಿದ್ದು, ಜಿಲ್ಲೆಯಲ್ಲಿ ಸಜ್ಜನರು ಜೀವಿಸುತ್ತಿದ್ದಾರೆ. ಆದರೆ ಈಗ ಕೋಮು ಸೂಕ್ಷ್ಮ ಪ್ರದೇಶ ಎನ್ನುವ ಹೆಸರು ಬಂದಿದ್ದು, ಕೆಲವು ಕಿಡಿಗೇಡಿಗಳಿಂದ ಶಾಂತಿಗೆ ಭಂಗ ತರುವ ಕೆಲಸ ಮಾಡುವುದರಿಂದ ಇಡೀ ಜಲ್ಲೆಗೆ ಕೆಟ್ಟ ಹೆಸರು ಬರುತ್ತದೆ. ಜಿಲ್ಲಾಡಳಿತ ಈ ರೀತಿಯ ವ್ಯಕ್ತಿಗಳನ್ನು ಗುರುತಿಸಿ ಗಡಿಪಾರು ಮಾಡುವುದು ಹಾಗೂ ಕಾನೂನುಕ್ರಮ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದರು.

ಹಬ್ಬಗಳಲ್ಲಿ ಎರಡು ಧರ್ಮವರು ತಮ್ಮ ಕುಟುಂಬದ ಜೊತೆಯಲ್ಲಿ ಪ್ರೀತಿ ವಿಶ್ವಾಸದಿಂದ ಸಡಗರ ಸಂಭ್ರಮದಿಂದ ಆಚರಿಸುವ ವಾತಾವರಣವನ್ನು ನಿರ್ಮಾಣ ಮಾಡಬೇಕೆ ಹೊರತು ಆತಂಕದಿಂದ ಭಯಬೀತರಾಗಿ ಆಚರಿಸುವಂತೆ ಅಲ್ಲ. ಈ ನಿಟ್ಟಿನಲ್ಲಿ ಯೋಚಿಸಿ ಯುವಜನರಿಗೆ ಕಾನೂನು ಉಲ್ಲಂಘನೆ ಮಾಡದಂತೆ ಹಿರಿಯರು ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ನೀಡಿ ಎರಡು ಹಬ್ಬಗಳನ್ನು ಶಾಂತಿಯುತವಾಗಿ ಆಚರಿಸೊಣ. ಎರಡು ಹಬ್ಬಗಳಲ್ಲೂ ಪರಿಸರ ಸ್ನೇಹಿಯಾಗಿ ಪಟಾಕಿ ಹಾಗೂ ಧ್ವನಿ ವರ್ಧಕ ಇನ್ನಿತರ ವಸ್ತುಗಳನ್ನು ಬಳಸಬೇಕು ಮತ್ತು ಯಾವುದೇ ಸುದ್ಧಿಗಳನ್ನು ಪ್ರಸಾರ ಮಾಡುವಾಗ ಮಾಧ್ಯಮದವರು ಅಧಿಕೃತ ಮಾಹಿತಿ ಇಲ್ಲದೇ ಸಮಾಜದಲ್ಲಿ ಸಮಸ್ಯೆಗಳ ವೈಭವಿಕರಿಸುವ ಸುದ್ಧಿಯನ್ನು ಪ್ರಸಾರ ಮಾಡುವುದು ಬೇಡ ಎಂದು ಮನವಿ ಮಾಡಿದರು.

ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್ ಕುಮಾರ್ ಅವರು ಮಾತನಾಡಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳು ಒಟ್ಟಿಗೆ ಬಂದಿರುವುದರಿಂದ ಜಿಲ್ಲಾ ಪೋಲಿಸ್ ಇಲಾಖೆಯ ವತಿಯಿಂದ ಈಗಾಗಲೇ ಜಿಲ್ಲೆಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಶಾಂತಿಸಭೆಗಳನ್ನು ನಡೆಸಲಾಗಿದೆ. ಇಡೀ ಜಿಲ್ಲಾದ್ಯಂತ 3500 ಕ್ಕೂ ಹೆಚ್ಚು ಕಡೆಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಹಾಗೂ ಈದ್ ಮಿಲಾದ್ ಹಬ್ಬ ಆಚರಣೆಯೂ ಎಲ್ಲಾ ಕಡೆ ನಡೆಯುತ್ತಿರುವುರಿಂದ ಎರಡು ಸಮುದಾಯದ ಮುಖಂಡರು ಹಾಗೂ ಯುವಕರಿಗೆ ಹಬ್ಬವನ್ನು ಉತ್ತಮವಾಗಿ ಶಾಂತಿಯುತವಾಗಿ ಆಚರಿಸುವಂತೆ ಸೂಚನೆ ನೀಡಲಾಗಿದೆ.

ಮೆರವಣಿಗೆಯ ವೇಳೆಯಲ್ಲಿ ಆಕ್ರೋಶಭರಿತವಾಗಿ ಇನ್ನೊಂದು ಧರ್ಮವನ್ನು ಗುರಿಯಾಗಿಸಿಕೊಂಡು ಘೋಷಣೆಗಳನ್ನು ಕೂಗುವ, ಪ್ರಚೋಧಿಸುವ 560 ಕ್ಕೂ ಹೆಚ್ಚು ಜನರನ್ನು ಈಗಾಗಲೇ ಗುರುತಿಸಲಾಗಿದೆ ಮತ್ತು ಸಮಾಜದಲ್ಲಿ ಕೆಟ್ಟ ಪರಿಣಾಮವನ್ನು ಬಿರುವ 1000 ಕ್ಕೂ ಹೆಚ್ಚು ಜನರಿಗೆ ಸಂಬಂಧಿಸಿದ ಪೋಲಿಸ್ ಠಾಣೆಯಲ್ಲಿ ಎಚ್ಚರಿಕೆಯನ್ನು ನೀಡಲಾಗಿದ್ದು ಕೆಲವು ವ್ಯಕ್ತಿಗಳನ್ನು ಗಡಿಪಾರು ಸಹ ಮಾಡಲಾಗುವುದು.

ಹಬ್ಬಗಳು ತೋರಿಕೆಗಾಗಿ ಮಾಡದೆ ಶ್ರದ್ಧಾಭಕ್ತಿಯಿಂದ ಆಚರಿಸಬೇಕು. ಎಲ್ಲಾ ಧರ್ಮದವರಿಗೂ ಹಬ್ಬಗಳನ್ನು ಆಚರಣೆ ಮಾಡಲು ಜಿಲ್ಲಾಡಳಿತ ಅವಕಾಶವನ್ನು ನೀಡುತ್ತದೆ. ಕಾನೂನಿನ ಕೆಲವು ನಿಯಮವನ್ನು ಸರಿಯಾಗಿ ಪಾಲಿಸಿ ಆಚರಿಸುವಂತೆ ಸೂಚಿಸಲಾಗುತ್ತದೆ. ಯಾರು ಕೂಡ ನಿರ್ಭಂದ ಎಂದುಕೊಳ್ಳಬೇಡಿ. ಹಬ್ಬಗಳ ಆಚರಣೆ ವೇಳೆ ಲಕ್ಷಾಂತರ ಜನರು ಸೇರುತ್ತಾರೆ. ಯಾರೋ ಹತ್ತು ಜನ ಕಿಡಿಗೇಡಿಗಳು ಮಾಡುವ ಕೃತ್ಯದಿಂದ ಲಕ್ಷಾಂತರ ಜನರ ನೆಮ್ಮದಿಯನ್ನು ಹಾಳು ಮಾಡುತ್ತಾರೆ. ಆದ್ದರಿಂದ ಎರಡು ಧರ್ಮದ ಮುಖಂಡರು, ಯುವಕರು ಸಮಾಜದಲ್ಲಿ ಶಾಂತಿಯನ್ನು ಕಾಪಾಡುವಲ್ಲಿ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಹೆಚ್ಚುವರಿ ಪೊಲೀಸ್ ರಕ್ಷಣಾಧಿಕಾರಿ ಅನಿಲ್ ಕುಮಾರ್ ಬೊಮ್ಮರಡಿ ಮಾತನಾಡಿ ಇಂದಿನ ದಿನಗಳಲ್ಲಿ ಯುವಕರಲ್ಲಿ ಭಕ್ತಿ -ಭಾವದಲ್ಲಿ ಹಬ್ಬಗಳ ಆಚರಣೆ ಕಾಣುತ್ತಿಲ್ಲ. ಪೈಪೋಟಿ ಬಿಳುವುದು, ನಾವೆ ಶ್ರೇಷ್ಠ ಎನ್ನುವುದು ಈ ರೀತಿ ಮನೋಭಾವದಿಂದ ಸಮಾಜದಲ್ಲಿ ಗಲಭೆ ಸೃಷ್ಠಿಯಾಗುತ್ತದೆ. ಅದ್ದರಿಂದ ಸಮಾಜದ ಹಿರಿಯರು ಎರಡು ಹಬ್ಬಗಳ ಕುರಿತು ಯುವಕರಿಗೆ ಮಾರ್ಗದರ್ಶನ ಮಾಡಿ ಸರಿಯಾದ ರೀತಿಯಲ್ಲಿ ಹಬ್ಬಗಳು ಮಾದರಿಯಾಗಿ ಆಚರಿಸಬೇಕಾಗಿದೆ. ಅನ್ಯ ಧರ್ಮದ ಕುರಿತು ಅವಹೇಳನ ಮಾಡುವ ಪೋಸ್ಟ್ಗಳು ಬ್ಯಾನರ್‌ಗಳು ಹಾಕಬೇಡಿ. ಎಲ್ಲರು ನಿಯಮ ಕಾನೂನು ಪಾಲಿಸಿ ಹಬ್ಬಗಳು ಉತ್ತಮವಾಗಿ ನಡೆಸಿ ಎಂದರು.

ವಿಧಾನ ಪರಿಷತ್ ಸದಸ್ಯೆ ಬಲ್ಕಿಷ್ ಬಾನು ಅವರು ಮಾತನಾಡಿ ಯಾವ ಧರ್ಮಗಳು ಗಲಭೆಯನ್ನು ಪ್ರಚೋದಿಸುವುದಿಲ್ಲ. ಎಲ್ಲಾ ಧರ್ಮಗಳು ಶಾಂತಿಯನ್ನು ಸಾರುತ್ತವೆ. ಮನುಷ್ಯರಾದ ನಾವು ಅದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಬಸವಣ್ಣನವರು ತತ್ವದಂತೆ ಮಾನವೀಯತೆ ಶ್ರೇಷ್ಠ ಎನ್ನುವುದನ್ನು ಅರಿಯಬೇಕಾಗಿದೆ. ಈ ಹಿಂದೆ ನಡೆದಿರುವ ಘಟನೆಗಳನ್ನು ಇಟ್ಟುಕೊಂಡು ಯಾರು ಕೂಡ ಗಲಭೆಗಳನ್ನು ಸೃಷ್ಠಿಸುವ ಮತ್ತು ಸಮಾಜದಲ್ಲಿ ಶಾಂತಿಗೆ ಭಂಗ ತರುವ ಕೆಲಸ ಮಾಡಬಾರದು. ಮುಖಂಡರು, ನಾಯಕರಾದ ನಾವುಗಳು ನಮ್ಮ ಸಮಾಜದಲ್ಲಿನ ಯುವಕರನ್ನು ನಿಯಂತ್ರಿಸುವ ಮತ್ತು ಸರಿ ತಪ್ಪುಗಳನ್ನು ತಿದ್ದುವ ಕೆಲಸವನ್ನು ಮಾಡಬೇಕು. ಎಲ್ಲಾ ಹಬ್ಬಗಳ ಆಚರಣೆಯಲ್ಲಿ ಪ್ರೀತಿ ವಿಶ್ವಾಸ ಶಾಂತಿಯಿಂದ ಎರಡು ಧರ್ಮದವರು ಪರಸ್ಪರ ಭಾಗವಹಿಸಬೇಕು ಎಂದರು.

ಶಿವಮೊಗ್ಗ ನಗರ ಶಾಸಕ ಎಸ್. ಎನ್. ಚನ್ನಬಸಪ್ಪ ಅವರು ಮಾತನಾಡಿ, ಎರಡು ಸಮುದಾಯದ ಹಬ್ಬಗಳು ಕಳೆದ ಎರಡು ವರ್ಷಗಳಿಂದ ಒಟ್ಟಿಗೆ ಆಗಮಿಸುತ್ತಿದ್ದು, ಶಾಂತಿ ಸಹಬಾಳ್ವೆಯಿಂದ ಎಲ್ಲರು ಒಟ್ಟಾಗಿ ಹೋಗಬೇಕು. ಜಿಲ್ಲೆಯನ್ನು ಶಾಂತಿಯುತವಾಗಿ ಇಟ್ಟುಕೊಳ್ಳಬೇಕು. ಆತಂಕವಾದಿಗಳನ್ನು ನಿಯಂತ್ರಿಸಬೇಕು. ಕಾನೂನು ರೀತಿಯಲ್ಲಿ ಕಟ್ಟುನಿಟ್ಟಿನ ಕ್ರಮವನ್ನು ತೆಗೆದುಕೊಳ್ಳಬೇಕು. ಇದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಈ ಹಿಂದೆ ಶಿವಮೊಗ್ಗದಲ್ಲಿ ನಡೆದಿರುವ ಅಹಿತಕರ ಘಟನೆಗಳು ಹೊರ ಜಿಲ್ಲೆ ರಾಜ್ಯಗಳಿಂದ ಬಂದು ಮಾಡಿದ್ದಾರೆ ಎಂದು ತನಿಖೆಗಳು ಹೇಳುತ್ತಿದೆ. ಅದ್ದರಿಂದ ಜಿಲ್ಲಾ ಪೋಲಿಸ್ ಗಡಿಗಳಲ್ಲಿ ಚೆಕ್ ಪೋಸ್ಟ್ಗಳನ್ನು ನಿರ್ಮಿಸಿ ಪರಿಶೀಲನೆ ಮಾಡಬೇಕಾಗಿದೆ. ನಿಬಂಧನೆಗಳಿಂದ ಹಬ್ಬಗಳನ್ನು ಆಚರಿಸುವಂತೆ ಆಗಬಾರದು. ಸಂಭ್ರಮದಿಂದ ಆಚರಣೆ ನಡೆಸಲು ಅವಕಾಶವನ್ನು ಜಿಲ್ಲಾಡಳಿತ ನೀಡಬೇಕು ಎಂದು ಸಲಹೆ ನೀಡಿದರು.

ಪ್ರತಿ ಬಾರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬಗಳು ಬಂದಾಗ ಗೊಂದಲಗಳು ಸೃಷ್ಠಿಯಾಗುತ್ತದೆ ಯಾವುದೋ ದೇಶ ರಾಜ್ಯದಲ್ಲಿ ನಡೆದ ಘಟಣೆಗಳಿಗೆ ಇಲ್ಲಿ ಪ್ರತಿಕಾರದ ಮಾತುಗಳು ಬರಬಾರದು. ಎಲ್ಲರು ಸಮಾನರು ಎನ್ನುವ ತತ್ವ ಪಾಲಿಸಿದರೆ ಯಾವುದೇ ಅಹಿತರ ಘಟನೆ ನಡೆಯುವುದಿಲ್ಲ. ನಾವೆಲ್ಲ ಮೊದಲು ಮಾನವರಾಗೋಣ. ಯಾವುದೆ ದುರ್ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸೋಣ.
– ರಮೇಶ್ ಬಾಬು, ವಿಶ್ವ ಹಿಂದು ಪರಿಷತ್ ಮುಖಂಡ

ಎರಡು ಸಮುದಾಯದ ಮುಖಂಡರು ಮೆರವಣಿಗೆಗಳಲ್ಲಿ ಯುವಜನರನ್ನು ಶಾಂತಿಯುತವಾಗಿ ಹಬ್ಬಗಳು ನಡೆಸುವಂತೆ ಮಾರ್ಗದರ್ಶನ ನೀಡಬೇಕು. ಈದ್ ಮಿಲಾದ್, ಗಣೇಶ ಹಬ್ಬ ದಿನದಂದು ಎಲ್ಲರು ಒಟ್ಟಾಗಿ ಎರಡು ಸಮುದಾಯದ ಮುಖಂಡರು ಭಾಗವಹಿಸಿ ನಾವೆಲ್ಲ ಒಂದೆ ಭಾರತೀಯರು ಎನ್ನುವ ಸಂದೇಶವನ್ನು ನೀಡಬೇಕಾಗಿದೆ.
– ಅಸ್ತಾಪ್ ಪರ್ವಿಜ್ , ಮುಸ್ಲಿಂ ಮುಖಂಡ

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್ ಅರುಣ್, ಡಾ.ಧನಂಜಯ ಸರ್ಜಿ, ಕರ್ನಾಟಕ ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ರವಿಕುಮಾರ್, ಮಹಾನಗರ ಪಾಲಿಕೆ ಆಯುಕ್ತರಾದ ಕವಿತಾ ಯೋಗಪ್ಪನವರ್, ಎಡಿಸಿ ಸಿದ್ದಲಿಂಗಪ್ಪ, ಪ್ರೋಬೆಷನರಿ ಐಎಎಸ್ ಅಧಿಕಾರಿ ದೃಷ್ಠಿ ಜೈಸ್ವಾಲ್, ಡಿಎಸ್ ಪಿ ಕೆ.ಕಾರ್ಯಾಯಪ್ಪ, ಪೋಲಿಸ್ ಅಧಿಕಾರಿಗಳು ಸಿಬ್ಬಂದಿಗಳು ಜಿಲ್ಲಾ ಎಲ್ಲಾ ತಾಲೂಕುಗಳ ಅಂಜುಮಾನ್ ಕಮಿಟಿ, ಹಿಂದೂ ಸಂಘಟನೆಗಳ ಮುಖಂಡರುಗಳು ಉಪಸ್ಥಿತರಿದ್ದರು.

Leave a Comment

error: Content is protected !!