ಬದಲಾವಣೆಗಳೊಂದಿಗೆ ಕಸ್ತೂರಿ ರಂಗನ್ ವರದಿ ಜಾರಿಗೆ ಪ್ರಸ್ತಾವನೆ ; ಸಚಿವ ಮಧು ಬಂಗಾರಪ್ಪ

Written by Malnadtimes.in

Published on:

WhatsApp Group Join Now
Telegram Group Join Now

SHIVAMOGGA ; ಸೆ.15 ರಂದು ಜಿಲ್ಲೆಯಲ್ಲಿ ನಡೆಯುವ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಹಾಗೂ ಇತರೆ ವಿಷಯಗಳ ಕುರಿತು ಮಾಹಿತಿ ನೀಡಲು ಶಂಕರಘಟ್ಟದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮಾತನಾಡಿದರು.

ಮಾನವ ಸರಪಳಿ ಮೂಲಕ ಜಾಗೃತಿ :

ಸೆ.15 ರಂದು ರಾಜ್ಯಾದ್ಯಂತ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ಬೃಹತ್ ಮಾನವ ಸರಪಳಿ‌ ಮೂಲಕ ಪ್ರಜಾಪ್ರಭುತ್ವ ಕುರಿತು ಜಾಗೃತಿ ಮೂಡಿಸಲಾಗುವುದು. ಜಿಲ್ಲೆಗೆ ಒಂದು ಮಾರ್ಗ ನಕ್ಷೆ ನೀಡಿದ್ದು 60 ಕಿ ಮೀ. ಮಾನವ ಸರಪಳಿ ಜೊತೆಗೆ ಶಾಲಾ ಮಕ್ಕಳು, ಜನರು ಸೇರಿ ಸುಮಾರು 50 ರಿಂದ 60 ಲಕ್ಷ ಗಿಡ ನೆಟ್ಟು ದಾಖಲೆ ನಿರ್ಮಿಸುವ ಗುರಿ ಹೊಂದಲಾಗಿದೆ. ಇದೊಂದು ಉತ್ತಮ ಕಾರ್ಯಕ್ರಮವಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿರು, ವಿದ್ಯಾರ್ಥಿಗಳು ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಿದರು.

ಬದಲಾವಣೆಗಳೊಂದಿಗೆ ಕಸ್ತೂರಿ ರಂಗನ್ ವರದಿ ಜಾರಿಗೆ ಪ್ರಸ್ತಾವನೆ :

ರಾಜ್ಯದಲ್ಲಿ ಕಸ್ತೂರಿ ರಂಗನ್ ವರದಿ ಅನುಷ್ಟಾನ ಮಾಡಿದಲ್ಲಿ ಮಲೆನಾಡು ಜನ ಬದುಕುವುದು ಕಷ್ಟ ಸಾಧ್ಯವಾಗುತ್ತದೆ. ಆದ್ದರಿಂದ ಕೇರಳದಲ್ಲಿ‌ ಮಾಡಿದಂತೆ ಕೆಲವು, ತಿದ್ದುಪಡಿ, ಬದಲಾವಣೆ ಮಾಡಿಕೊಂಡು ಜಾರಿಗೆ ತಂದರೆ ಒಳಿತು. ಶಿರೂರು ಭೂಕುಸಿತ ಇತರೆ ಪ್ರಕರಣದಿಂದ ವರದಿ ಜಾರಿ ತರಲು ಒತ್ತಡ ಹೆಚ್ಚಾಗುತ್ತಿದೆ. ಆದರೆ ನಾವು ಜನರಿಗೂ ಅನುಕೂಲ ಆಗಬೇಕು, ಕಸ್ತೂರಿ ರಂಗನ್ ವರದಿ ಜಾರಿಯಾಗಬೇಕು ಆ ರೀತಿಯಲ್ಲಿ ತಿದ್ದುಪಡಿ, ಬದಲಾವಣೆ ಮಾಡಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಪಕ್ಷಾತೀತವಾಗಿ ಎಲ್ಲರನ್ನು ಕರೆದು, ಅಭಿಪ್ರಾಯ ಸಂಗ್ರಹಿಸಲಾಗುವುದು. ರಾಜಕಾರಣದಿಂದ ಹೊರತುಪಡಿಸಿ ಈ ವಿಷಯವನ್ನು‌ ನೋಡಿ‌ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಿದೆ. ಬಹುಶಃ ಸೆಪ್ಟೆಂಬರ್ ಅಂತ್ಯದೊಳಗೆ ಕೇಂದ್ರಕ್ಕೆ ವರದಿ ನೀಡಬೇಕಿದೆ. ಜೀವನೋಪಾಯ ಕಲ್ಪಿಸದಿದ್ದರೆ ಜನ ಏನು‌ ಮಾಡುತ್ತಾರೆ. ಜನರಿಗೆ ಅನುಕೂಲ, ಪರಿಸರಕ್ಕೂ ಧಕ್ಕೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು. ಕೆಲವು ತಿದ್ದುಪಡಿಗಳೊಂದಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಪರಿಸರ ಉಳಿದಿದ್ದರೆ ಅದು ರೈತರಿಂದ ಎಂದು ಮರೆಯಬಾರದು. ಅವರಿಗೂ ಬದುಕಲು ಅನುಕೂಲ ಆಗಬೇಕು. ಹಾಗೂ ಇಂದು ಬೆಳೆಯುತ್ತಿರುವ ಕುವೆಂಪು ವಿಶ್ವವಿದ್ಯಾಲಯದ ಅಭಿವೃದ್ಧಿ ಬಗ್ಗೆ ಚರ್ಚಿಸಲಾಗುವುದು. ಪ್ರಗತಿ ಪರಿಶೀಲನೆ ನಡೆಸಿ ಲೋಪಗಳಿದ್ದರೆ ಸರಿಪಡಿಸಿ, ಉಳಿಸಿ, ಬೆಳೆಸಲಾಗುವುದು. ವಿಶ್ವವಿದ್ಯಾಲಯ ಜಿಲ್ಲೆಗೆ ಕಿರೀಟ ಇದ್ದಂತೆ ಇದ್ದು, ವಿವಿ ಯಲ್ಲಿನ ಪ್ರಸ್ತುತ ವ್ಯವಸ್ಥೆ ಬಗ್ಗೆ ಪರಿಶೀಲಿಸಲಾಗುವುದು. ಲೋಪಗಳಿದ್ದರೆ ಸಂಬಂಧಿಸಿದವರ ವಿರುದ್ದ ವಿಚಾರಣೆ ಮಾಡಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದರು.

2500 ಕೋಟಿ ರೂ. ಸಂಗ್ರಹ :

ನಮ್ಮ ಶಾಲೆ ನಮ್ಮ ಜಬಾಬ್ದಾರಿ ಒಂದು ಅತ್ಯುತ್ತಮ ಕಾರ್ಯಕ್ರಮವಾಗಿದ್ದು, 22 ಸಾವಿರ ವಿದ್ಯಾರ್ಥಿಗಳ ವಾಟ್ಸಪ್ ಗ್ರೂಪ್ ಮಾಡಲಾಗಿದೆ. 50 ಸಾವಿರ ಹಳೇ ವಿದ್ಯಾರ್ಥಿ ಸಂಘ ಇದೆ. ನಮ್ಮ ತಂದೆ ಓದಿದ ಶಾಲೆಗೆ ರೂ. 10 ಲಕ್ಷ ನೀಡಿದ್ದೇನೆ. ಸಿಎಸ್ ಆರ್ ನಿಧಿ ಹೊರತುಪಡಿಸಿ, ಎಲ್ಲರೂ ತಾವು ಓದಿದ ಶಾಲೆ ಬಗ್ಗೆ ಒಂದು ಜವಾಬ್ದಾರಿ ತೆಗೆದುಕೊಂಡು ಅಭಿವೃದ್ದಿಗೆ ಸಹಕರಿಸಿದರೆ ಒಳಿತು. ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ಸಿಎಸ್ ಆರ್ ನಿಧಿ ಮೂಲಕ ರೂ. 2500 ಕೋಟಿ ಸಂಗ್ರಹಿಸಲಾಗಿದೆ.

ಆರು ದಿನವೂ ಮೊಟ್ಟೆ :

ಇನ್ನು ಮುಂದೆ ವಾರದಲ್ಲಿ ಆರು ದಿನ ಮೊಟ್ಟೆ ನೀಡಲಾಗುವುದು. ಜಿಲ್ಲೆಗಳಲ್ಲಿ ಶೈಕ್ಷಣಿಕ ಪ್ರಗತಿ ಪರಿಶೀಲಿಸಲು ಶಾಸಕರ ಅಧ್ಯಕ್ಷತೆಯಲ್ಲಿ ಶೈಕ್ಷಣಿಕ ಸಮಿತಿಗಳನ್ನು‌ ಆರಂಭಿಸಲಾಗುವುದು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಆರ್ ಪ್ರಸನ್ನ ಕುಮಾರ್, ಮುಖಂಡರಾದ ಕಲಗೋಡು ರತ್ನಾಕರ, ರಮೇಶ್ ಶೆಟ್ಟಿ, ಶ್ರೀನಿವಾಸ ಕರಿಯಣ್ಣ, ಶಾಂತಕುಮಾರ್, ಮುಂತಾದವರು ಹಾಜರಿದ್ದರು.

Leave a Comment

error: Content is protected !!