ರಸಗೊಬ್ಬರ ಮತ್ತು ಬಿತ್ತನೆ ಬೀಜಗಳನ್ನು ಹೆಚ್ಚಿನ ದರದಲ್ಲಿ ಮಾರಾಟ ಮಾಡಿದರೆ ಲೈಸೆನ್ಸ್ ರದ್ದುಪಡಿಸಿ ; ಶಿವಮೊಗ್ಗ ಡಿಸಿ ಗುರುದತ್ತ ಹೆಗಡೆ ಸೂಚನೆ

Written by Malnadtimes.in

Published on:

WhatsApp Group Join Now
Telegram Group Join Now

Shivamogga | ಮಾರಾಟಗಾರರು ರಸಗೊಬ್ಬರ (Fertilizer) ಮತ್ತು ಬಿತ್ತನೆ ಬೀಜಗಳನ್ನು (Seeds) ರೈತರಿಗೆ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿರುವುದು ಕಂಡು ಬಂದಲ್ಲಿ ಪರವಾನಗೆ ರದ್ದುಪಡಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಶಿವಮೊಗ್ಗ ಜಿಲ್ಲಾಧಿಕಾರಿ (Shivamogga DC) ಗುರುದತ್ತ ಹೆಗಡೆ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಶುಕ್ರವಾರ ಮುಂಗಾರು ಹಂಗಾಮು ಪೂರ್ವ ಸಿದ್ಧತಾ ಸಭೆಯನ್ನು ನಡೆಸಿ ಮಾತನಾಡಿದ ಅವರು, ಜಿಲ್ಲೆಯ ಉಪ ಕೃಷಿ ನಿರ್ದೇಶಕರು ಮತ್ತು ಸಹಾಯಕ ಕೃಷಿ ನಿರ್ದೇಶಕರಗಳು ಹಾಗೂ ಕೃಷಿ ಅಧಿಕಾರಿಗಳು ಎಲ್ಲೆಲ್ಲಿ ಬಿತ್ತನೆ ಬೀಜಗಳು ಲಭ್ಯವಿರುತ್ತವೆಯೋ ಅಲ್ಲಿಂದ ಕೊರತೆ ಇರುವ ಕಡೆ ಪೂರೈಸಲು ಕ್ರಮ ವಹಿಸುವುದರ ಜೊತೆಗೆ ಎಲ್ಲಾ ಪರಿಕರಗಳನ್ನು ಗರಿಷ್ಟ ಮಾರಾಟ ದರದೊಳಗೆ ಮಾರಾಟ ಮಾಡುತ್ತಿರುವ ಬಗ್ಗೆ ಹಾಗೂ ಯಾವುದೇ ರೀತಿಯ ಸಂಪರ್ಕಗಳನ್ನು ಮಾಡದ ರೀತಿಯಲ್ಲಿ ಸಮನ್ವಯ ಸಾಧಿಸಿ ಮಾರಾಟಗಾರರು ರೈತರಿಗೆ ರಸಗೊಬ್ಬರ ಮತ್ತು ಬಿತ್ತನೆ ಬೀಜಗಳನ್ನು ಹೆಚ್ಚಿನ ದರದಲ್ಲಿ ಮಾರಾಟ ಮಾಡಿದರೆ ಅಂತವರ ಪರವಾನಿಗೆಯನ್ನು ರದ್ದುಪಡಿಸುವ ಬಗ್ಗೆ ಸೂಕ್ತಕ್ರಮ ವಹಿಸುವಂತೆ ಸೂಚಿಸಿದರು.

ಜಂಟಿ ಕೃಷಿ ನಿರ್ದೇಶಕರಾದ ಜಿ.ಸಿ ಪೂರ್ಣಿಮ ಅವರು ಮಾತನಾಡಿ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಜನವರಿಯಿಂದ ಇಲ್ಲಿಯವರೆಗೆ 124 ಮಿ.ಮೀ ವಾಡಿಕೆ ಮಳೆಗೆ 199 ಮಿ.ಮೀ ಮಳೆಯಾಗಿದ್ದು, ಶೇ. 61 ರಷ್ಟು ಹೆಚ್ಚುವರಿ ಮಳೆಯಾಗಿರುತ್ತದೆ. ಕಳೆದ ಒಂದು ವಾರದಿಂದ ಮಳೆ ಪ್ರಮಾಣ ಕಡಿಮೆಯಾದ ಪ್ರಯುಕ್ತ 2024-25ರ ಮುಂಗಾರು ಹಂಗಾಮಿನ ವಾಡಿಕೆ ವಿಸ್ತೀರ್ಣ 1,23,580 ಹೆಕ್ಟೇರಿಗೆ ಕೇವಲ 400 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಕಾರ್ಯ ಪ್ರಗತಿಯಲ್ಲಿದೆ.

2024 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 1,23,580 ಹೆಕ್ಟೇರು ಬಿತ್ತನೆ ಪ್ರದೇಶಕ್ಕೆ 35,625 ಕ್ವಿಂಟಾಲ್ ಗಳಷ್ಟು ಬಿತ್ತನೆ ಬೀಜಗಳ ಅವಶ್ಯಕತೆ ಇದ್ದು ಮೇ 30 ರವರೆಗೆ ವಿವಿಧ ಸಂಸ್ಥೆಗಳಲ್ಲಿ 24,744 ಕ್ವಿಂಟಾಲ್ ಬಿತ್ತನೆ ಬೀಜಗಳು ಲಭ್ಯವಿರುತ್ತದೆ. ರೈತ ಸಂಪರ್ಕ ಕೇಂದ್ರಗಳಲ್ಲಿ ಸಹಾಯಧನದಡಿ ವಿತರಿಸಲು 9265 ಕಿಂಟಾಲ್ ಗಳಿಗೆ ಅವಕಾಶವಿದ್ದು ಈಗಾಗಲೇ 11820 ಕ್ವಿಂಟಾಲ್ ಗೆ ವಿವಿಧ ಸಂಸ್ಥೆಗಳಿಗೆ ಬೇಡಿಕೆಯನ್ನು ಸಲ್ಲಿಸಲಾಗಿದೆ, ಹಾಗೂ 1960 ಕ್ವಿಂಟಾಲ್ ಪೂರೈಕೆಯಾಗಿ 560 ಕ್ವಿಂಟಾಲ್ ವಿತರಣೆ ಆಗಿರುತ್ತದೆ.

ಜಿಲ್ಲೆಗೆ 2024-25ರ ಸಾಲಿನ ಮುಂಗಾರು ಹಂಗಾಮಿಗೆ 91,416 ಮೆಟ್ರಿಕ್ ಟನ್ ಪ್ರಮಾಣದ ವಿವಿಧ ಗ್ರೇಡ್‍ಗಳ ರಸಗೊಬ್ಬರಗಳ ಬೇಡಿಕೆಯಿರುತ್ತದೆ. ಮೇ 31ರ ಅಂತ್ಯಕ್ಕೆ ಆರಂಭ ಶಿಲ್ಕು ಸೇರಿ ಸುಮಾರು 70,326 ಮೆ. ಟನ್ ಪ್ರಮಾಣದ ರಸಗೊಬ್ಬರಗಳು ಲಭ್ಯವಿದ್ದು ಅದರಲ್ಲಿ ಸುಮಾರು 18135 ಟನ್ ಗಳಷ್ಟು ವಿತರಣೆಯಾಗಿದ್ದು ಹಾಲಿ 52191 ಮೆ. ಟನ್ ಪ್ರಮಾಣದ ರಸಗೊಬ್ಬರ ದಾಸ್ತಾನು ಇರುತ್ತದೆ. ಸದ್ಯಕ್ಕೆ ಯಾವುದೇ ರಸಗೊಬ್ಬರದ ಕೊರತೆ ಇರುವುದಿಲ್ಲ ಎಂದು ತಿಳಿಸಿದರು.

ಈ ಸಭೆಯಲ್ಲಿ ಬಿತ್ತನೆ ಬೀಜ/ರಸಗೊಬ್ಬರ ಗುಣಮಟ್ಟವನ್ನು ಕಾಯ್ದುಕೊಂಡು ಸೂಕ್ತ ರೀತಿಯಲ್ಲಿ ವಿತರಿಸಲು ಮತ್ತು ಹಂಗಾಮಿಗೆ ಅನುಗುಣವಾಗಿ ಅಗತ್ಯ ಕೃಷಿ ಚಟುವಟಿಕೆಗಳನ್ನು ಸಕಾಲದಲ್ಲಿ ಕೈಗೊಂಡು ಪ್ರಧಾನಮಂತ್ರಿ ಫಸಲ್ ಬೀಮ ಯೋಜನೆಯ ಪ್ರಚಾರದ ಕರಪತ್ರವನ್ನು ಬಿಡುಗಡೆಗೊಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ನೇಹಲ್ ಸುಧಾಕರ್ ಲೋಖಂಡೆ, ಕೃಷಿ ಇಲಾಖೆಯ ಶಿವಮೊಗ್ಗ ಜಿಲ್ಲೆಯ ನೋಡಲ್ ಅಧಿಕಾರಿಯಾದ ಡಾ. ಲಕ್ಷಕಾಂತ್ ಬಿ ಪಿ, ಉಪ ಕೃಷಿ ನಿರ್ದೇಶಕರು, ಸಹಾಯಕ ಕೃಷಿ ನಿರ್ದೇಶಕರು, ಸಹಕಾರ ಮಾರಾಟ ಮಹಾ ಮಂಡಳಿಯ ಮತ್ತು ಕರ್ನಾಟಕ ರಾಜ್ಯ ಬೀಜ ನಿಗಮದ ವ್ಯವಸ್ಥಾಪಕರುಗಳು, ರಸಗೊಬ್ಬರ ಮಾರಾಟ ಪ್ರತಿನಿಧಗಳು, ಕೃಷಿಪರಿಕರ ಮಾರಾಟಗಾರರ ಸಂಘದ ಪ್ರತಿನಿಧಿಗಳು ಉಪಸ್ಥಿತರಿದ್ದರು.

Leave a Comment

error: Content is protected !!