HOSANAGARA | ಶಾಲಾ ವಾಹನದಲ್ಲಿ (School Vehicles) ಕಡ್ಡಾಯವಾಗಿ ವಾಹನದ ದಾಖಲಾತಿ ಹಾಗೂ ನಿಗದಿತ ಸೀಟ್ಗಿಂತ ಹೆಚ್ಚು ಮಕ್ಕಳನ್ನು ಕರೆದುಕೊಂಡು ಹೋದರೆ ಯಾವುದೇ ಮುಲಾಜಿಲ್ಲದೇ ಕೇಸ್ ಹಾಕುವುದಾಗಿ ಹೊಸನಗರ ಸರ್ಕಲ್ ಇನ್ಸ್ಪೆಕ್ಟರ್ ಗುರಣ್ಣ ಎಸ್ ಹೆಬ್ಬಾಳ್ ವಾಹನ ಚಾಲಕರಿಗೆ ಹಾಗೂ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ.
ಪಟ್ಟಣದಲ್ಲಿ ಬೆಳಿಗಿನ ವೇಳೆಯಲ್ಲಿ ಜನ ದಟ್ಟಣೆಯ ಪ್ರದೇಶವಾಗಿದ್ದು ವಾಹನಗಳ ಸಂಖ್ಯೆಯು ಮಿತಿಗಿಂತ ಹೆಚ್ಚು ಓಡಾಟ ನಡೆಸುತ್ತಿರುತ್ತವೆ. ಅದರಲ್ಲಿಯೂ ಹೆಚ್ಚಿನ ಶಾಲೆಗಳಿಗೆ ಪಟ್ಟಣದ ಮಧ್ಯ ಭಾಗದಿಂದಲೇ ಓಡಾಟ ನಡೆಸಬೇಕಾಗಿರುವುದರಿಂದ ಚಾಲಕರು ನಿಧಾನವಾಗಿ ವಾಹನಗಳನ್ನು ಓಡಿಸಬೇಕಾಗಿರುವುದು ತಮ್ಮ ಕರ್ತವ್ಯ ಎಂದರು.
ದಾಖಲೆ ಪತ್ರ ಕಡ್ಡಾಯ :
ಶಾಲಾ ವಾಹನಗಳಲ್ಲಿ ಮಕ್ಕಳನ್ನು ತುಂಬಿಸಿಕೊಂಡು ಹೋಗುವಾಗ ಆರ್.ಸಿ ಪುಸ್ತಕ, ಇತ್ತೀಚಿನ ಎಮಿಷನ್ ಟೆಸ್ಟ್ ಪ್ರಮಾಣಪತ್ರ, ಚಾಲ್ತಿಯಲ್ಲಿರುವ ವಿಮಾಪತ್ರ, ಚಾಲನ ಪರವಾನಗಿ, ಬ್ಯಾಡ್ಜ್ ಹಾಗೂ ಇತರೆ ದಾಖಲಾತಿಗಳನ್ನು ತಮ್ಮ ವಾಹನದಲ್ಲಿ ಇಟ್ಟುಕೊಂಡು ವಾಹನ ಚಾಲನೆ ಮಾಡಬೇಕು ಇದರ ಜೊತೆಗೆ ಪ್ರಥಮ ಚಿಕಿತ್ಸೆಯ ಬಾಕ್ಸ್ ಕಡ್ಡಾಯವಾಗಿ ಇರಬೇಕು ಎಂದರು.
ಕುಡಿದು ವಾಹನ ಓಡಿಸಿದರೇ ಲೈಸನ್ಸ್ ರದ್ದು :
ಮದ್ಯಪಾನ ಮಾಡಿ ವಾಹನ ಚಲಾಯಿಸಿದರೆ ಚಾಲನ ಪರವಾನಗಿ ರದ್ದುಪಡಿಸುವುದರ ಜೊತೆಗೆ ತಕ್ಕ ಶಿಕ್ಷಗೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಮೊಬೈಲ್ ಫೋನ್ ಬಳಕೆ ನಿಷೇಧ :
ವಾಹನಗಳನ್ನು ಓಡಿಸುವಾಗ ಮೊಬೈಲ್ ಫೋನ್ ಬಳಸುವುದಾಗಲಿ ಅಥವಾ ಮಾತನಾಡುವುದನ್ನು ಮಾಡಿದರೆ ಅಂತಹ ವಾಹನ ಡ್ರೈವರ್ಗಳು ದಂಡ ಕಟ್ಟಬೇಕಾಗುತ್ತದೆ ಎಂದು ಎಚ್ಚರಿಸಿದರು.
ಆಟೋ ರಿಕ್ಷಾ ಮಾಲೀಕರಿಗೂ ವಾರ್ನಿಂಗ್ :
ಶಾಲಾ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವಾಗ ವೇಗದ ಮಿತಿಯಿರಲಿ ಅದರ ಜೊತೆಗೆ ಒಂದು ಆಟೋ ರಿಕ್ಷಾಗೆ ಎಷ್ಟು ಮಕ್ಕಳನ್ನು ಹಾಕಬೇಕು ಎಂದು ಸರ್ಕಾರದ ಸುತ್ತೋಲೆಯಿದ್ದು ಆ ಸುತ್ತೋಲೆಯನ್ನು ತಿರಸ್ಕರಿಸಿ ಹೆಚ್ಚು ಮಕ್ಕಳನ್ನು ಆಟೋದಲ್ಲಿ ತುಂಬಿದರೇ ಆಟೋರಿಕ್ಷಾ ಜಾಪ್ತಿ ಮಾಡಲಾಗುವುದು ಇದರ ಜೊತೆಗೆ ಕಾನೂನನ್ನು ಎದುರಿಸಬೇಕಾಗುತ್ತದೆ ಎಂದು ಆಟೋ ರೀಕ್ಷಾದವರಿಗೆ ಈ ಮೂಲಕ ಎಚ್ಚರಿಸಿದರು.
ಪೋಷಕರೆ ನಿಮ್ಮ ಮಕ್ಕಳ ಬಗ್ಗೆ ಕಾಳಜಿ ಇರಲಿ :
ಪೋಷಕರು ತಮ್ಮ ಮಕ್ಕಳು ಶಾಲೆಗೆ ಹೋಗಿ ಬರುತ್ತಾರೆ. ನಮ್ಮ ಜವಾಬ್ದಾರಿ ತಪ್ಪಿತು ಎಂದುಕೊಂಡರೆ ಅದು ನಿಮ್ಮ ತಪ್ಪು ಕಲ್ಪನೆ. ನೀವು ಶಾಲೆಯ ವಾಹನಕ್ಕೆ ಕಳುಹಿಸುವಾಗ ಶಾಲೆಯ ವಾಹನದಲ್ಲಿ ಎಷ್ಟು ಮಕ್ಕಳಿದ್ದಾರೆ ಆಟೋರಿಕ್ಷಾದಲ್ಲಿ ಎಷ್ಟು ಮಕ್ಕಳಿದ್ದಾರೆ ನಿಗದಿತ ಸೀಟಿಗಿಂತ ಹೆಚ್ಚು ಮಕ್ಕಳನ್ನು ಹಾಕಿದ್ದರೇಯೇ? ಎಂದು ಪರೀಕ್ಷಿಸಿಕೊಂಡು ಡ್ರೈವರ್ ಮದ್ಯಪಾನ ಮಾಡಿದ್ದರೇಯೇ ಎಂಬುದನ್ನು ಖಚಿತ ಮಾಡಿಕೊಂಡು ನಿಮ್ಮ ಮಕ್ಕಳನ್ನು ಶಾಲೆಯ ವಾಹನಕ್ಕೆ ಕಳುಹಿಸಿ ಎಂದು ಸಿಪಿಐ ತಿಳಿಸಿದರು.