ರಿಪ್ಪನ್ಪೇಟೆ: ದೇಶದಲ್ಲಿ ನಡೆದ ಲೋಕಸಭಾ ಚುನಾವಣೆ (Loksabha Election)ಯ ಸಮೀಕ್ಷೆಯಂತೆ ಮೋದಿ ನೇತೃತ್ವದ ಸರ್ಕಾರ ಅಧಿಕಾರದ ಗದ್ದುಗೆ ಏರುತ್ತದೆಂಬ ಎಕ್ಸಿಟ್ ಪೋಲ್ (Exit Polls) ವರದಿಯಂತೆ ದೇಶದ ಆರ್ಥಿಕ, ಇನ್ನಿತರ ವ್ಯವಸ್ಥೆ ಬುಡಮೇಲಾಗುತ್ತದೆಂದು ಸಾಮಾಜಿಕ ಕಾರ್ಯಕರ್ತ, ಏಕಾಂಗಿ ಹೋರಾಟಗಾರ ರಿಪ್ಪನ್ಪೇಟೆ ಟಿ.ಆರ್.ಕೃಷ್ಣಪ್ಪ ಅರೆಬೆತ್ತಲಾಗಿ ತಲೆಕೆಳಗಾಗಿ ಇಲ್ಲಿನ ವಿನಾಯಕ ವೃತ್ತದಲ್ಲಿ ಯೋಗಾಶನ ಮಾಡುವ ಮೂಲಕ ತಮ್ಮ 74ನೇ ವಯಸ್ಸಿನಲ್ಲೂ ನವಯುವಕನಂತೆ ವ್ಯಾಯಾಮದ ಪಾಠವನ್ನು ಹೇಳಿಕೊಟ್ಟರು.
ಮಲಾಲ ಮತ್ತು ನ್ಯಾಯಾಧೀಶರ ಬಗ್ಗೆ ನಡೆದಂತಹ ಹಲವು ವಿಚಾರಗಳ ವರದಿಯ ಪತ್ರಿಕೆಯನ್ನು ಪ್ರದರ್ಶಿಸಿ, ನಾನು ಈ ಹಿಂದೆ ಆರ್.ಎಸ್.ಎಸ್.ನಲ್ಲಿ ಸ್ವಯಂ ಸೇವಕನಾಗಿ ಕಾರ್ಯನಿರ್ವಹಿಸಿದ್ದು ಆಗ ದೇಶದ ಅಜಾತಶತೃ ಅಟಲ್ ಬಿಹಾರಿ ವಾಜಪೇಯಿ ಶಿವಮೊಗ್ಗಕ್ಕೆ ಬಂದಾಗ ನಾನು ಸಂಘದಲ್ಲಿ ಗ್ರಾಮೀಣ ಪ್ರದೇಶಕ್ಕೂ ರಾಷ್ಟ್ರೀಯ ನಾಯಕರು ಬರಬೇಕು ಅವರ ವಿಚಾರಧಾರೆಗಳು ಗ್ರಾಮೀಣ ಜನರಲ್ಲಿ ಜಾಗೃತಗೊಳಿಸುವಂತಾಗಬೇಕು ಎಂದು ಸಂಘದಲ್ಲಿಟ್ಟಾಗ ನನಗೆ ಸಿಕ್ಕಿದ್ದು ಸಂಘದಿಂದ ತಮ್ಮನ್ನು ಹೊರಹಾಕಲಾಗಿದೆ ಎಂಬ ಪತ್ರ. ಇದರಿಂದ ನಾನು ಭಯಗೊಳ್ಳದೆ ಕಡೆಗೂ ವಾಜಪೇಯಿಯವರು ನನ್ನ ಕರೆಯನ್ನು ಮನ್ನಿಸಿ ರಿಪ್ಪನ್ಪೇಟೆಗೆ ಬಂದು ಸಾರ್ವಜನಿಕರ ಸಭೆ ನಡೆಸಿದ್ದರು ಎಂದರು.
ಒಟ್ಟಾರೆಯಾಗಿ ಹಿಂದಿನ ಆರ್.ಎಸ್.ಎಸ್.ನ ತತ್ವ ಸಿದ್ದಾಂತಗಳು ಇಲ್ಲದಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು, ನಾವು ಗಟ್ಟಿ ಧ್ವನಿಯಾಗಿದ್ದರೆ ಮಾತ್ರ ಬೆಲೆ, ಇಲ್ಲವಾದರೆ ಯಾರು ನಮ್ಮನ್ನು ಕೇಳದಂತಾಗುತ್ತದೆ ಎಂದು ತಮ್ಮ ಈ ಹಿಂದಿನ ತತ್ವ ಸಿದ್ಧಾಂತದ ಕುರಿತು ಮೇಲಕು ಹಾಕಿದರು.
ಮೊದಲು ನಮ್ಮೂರು ಚೆನ್ನಾಗಿದ್ದರೆ ನಂತರ ರಾಜ್ಯ ದೇಶದ ಬಗ್ಗೆ ಮಾತನಾಡಬೇಕು ಹಾಗಾಗಿದೆ ನಮ್ಮ ಸ್ಥಿತಿಯೆಂದು ಹೇಳಿ ನಾವು ಸೇವಿಸುವ ಆಹಾರ ಕ್ರಮ ಮತ್ತು ಯೋಗಾಭ್ಯಾಸದಿಂದ ನಮ್ಮ ಆರೋಗ್ಯ ಸದೃಢಗೊಳಿಸಿಕೊಳ್ಳಲು ಸಾಧ್ಯವೆಂಬ ಬಗ್ಗೆ ತಮ್ಮ ದೇಹ ದಂಡಿಸುವ ಕೆಲಸದಿಂದ ತನ್ನ 74 ವಯಸ್ಸಿನಲ್ಲಿಯೂ ಸದೃಢವಾಗಿರುವ ಗುಟ್ಟಿನ ಪಾಠವನ್ನು ಬಹಿರಂಗವಾಗಿ ವಿನಾಯಕ ವೃತ್ತದಲ್ಲಿ ಉಲ್ಟಾನಿಂತು ವಿನೂತನವಾಗಿ ತಮ್ಮ ಆರೋಗ್ಯದ ಗುಟ್ಟಿನ ಮಾಹಿತಿ ನೀಡಿ ಯುವಕರನ್ನು ಜಾಗೃತಿಗೊಳಿಸಿದರು.