HOSANAGARA | ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಕಾನೂನುಗಳ ಅರಿವು ಮಕ್ಕಳಿಗೆ ಬಾಲ್ಯದಿಂದಲೇ ನೀಡಬೇಕು. 14 ವರ್ಷದೊಳಗಿನ ಮಕ್ಕಳನ್ನು ಕೂಲಿಗಾಗಿ ದುಡಿಸುವುದು, 17 ವರ್ಷದೊಳಗಿನ ಮಕ್ಕಳನ್ನು ಅಪಾಯಕಾರಿ ಕೆಲಸದಲ್ಲಿ ತೊಡಗಿಸುವುದು ದಂಡಾರ್ಹ ಅಪರಾಧ ಎಂದು ಹೊಸನಗರದ ಹಿರಿಯ ವ್ಯವಹಾರ ನ್ಯಾಯಾದೀಶ ಹಾಗೂ ಕಾನೂನು ಸೇವಾ ಪ್ರಾಧಿಕಾರದ ಮುಖ್ಯಸ್ಥ ಫಾರೂಖ ಝೂರೆ ತಿಳಿಸಿದರು.
ತಾಲ್ಲೂಕು ಆಡಳಿತ ಹಾಗೂ ತಾಲ್ಲೂಕು ಪಂಚಾಯತ್ ಇವರ ಸಂಯುಕ್ತ ಆಶ್ರಯದಲ್ಲಿ ಶಿಶು ಅಭಿವೃದ್ಧಿ ಯೋಜನಾ ಕಛೇರಿ ಆವರಣದಲ್ಲಿ “ಮಾನವ ಕಳ್ಳ ಸಾಗಾಣಿಕೆ ತಡೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ 2006 ಮತ್ತು ಬಹಿಷ್ಕಾರ ಪದ್ದತಿ ನಿರ್ಮೂಲನೆ ಬಗ್ಗೆ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ”ವನ್ನು ಏರ್ಪಡಿಸಲಾಗಿದ್ದು ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹೊಸನಗರದ ಜೆ.ಎಂ.ಎಫ್.ಸಿ ನ್ಯಾಯಲಯದ ಪ್ರಧಾನ ನ್ಯಾಯಾಧೀಶ ಮಾರುತಿ ಶಿಂದೆ ಮಾತನಾಡಿ, ಮಾನವ ಕಳ್ಳ ಸಾಗಾಣಿಕೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ಹೆಚ್ಚು ಬಲಿಯಾಗುತ್ತಿದ್ದಾರೆ. ಮಕ್ಕಳು ಮೊಬೈಲ್ಗಳು ಮತ್ತು ಅಪ್ರಾಪ್ತರು ವಾಹನ ಚಾಲನೆಯಿಂದಾಗುವ ದುಷ್ಪರಿಣಾಮಗಳನ್ನು ವಿವರಿಸಿ ತಿಳಿ ಹೇಳಿದರು.
ತಹಶೀಲ್ದಾರ್ ರಶ್ಮಿ ಹಾಲೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ಕಾರ್ಯಕ್ರಮ ಬಹಳ ಮಹತ್ವದಾಗಿದೆ. ಬಾಲ್ಯ ವಿವಾಹವು ಮಕ್ಕಳ ಬದುಕನ್ನು ಹಾಳು ಮಾಡುತ್ತಿದೆ. ಹೆಣ್ಣು ಮಕ್ಕಳ ಜೀವಿಸುವ ಹಕ್ಕು ಶೈಕ್ಷಣಿಕ ಹಕ್ಕನ್ನು ಕಿತ್ತುಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಮೇಲ್ವಿಚಾರಕರ ಪಾತ್ರ ಮಹತ್ವದಾಗಿದೆ. ಎಲ್ಲೇ ಬಾಲ್ಯ ವಿವಾಹ ನಡೆಯುತ್ತಿದ್ದರು ಎಲ್ಲರು ಸೇರಿ ಬಾಲ್ಯ ವಿವಾಹವನ್ನು ತಡೆಯೋಣ ಬಹಿಷ್ಕಾರ ಪದ್ಧತಿ ಇಂದಿಗೂ ಜೀವಂತವಾಗಿರುವುದು ವಿಷಾದನೀಯ. ಮಾನವ ಕಳ್ಳ ಸಾಗಾಣಿಕೆ ಇತ್ತೀಚಿನ ದಿನಗಳಲ್ಲಿ ವ್ಯವಸ್ಥಿತವಾಗಿ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಇದರ ವಿರುದ್ಧ ಎಚ್ಚೆತ್ತುಕೊಳ್ಳಬೇಕು ನಮ್ಮ ಸುತ್ತಮುತ್ತಲಿರುವ ಎಲ್ಲರ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿರುತ್ತದೆ ಎಂದು ತಮ್ಮ ಅಧ್ಯಕ್ಷೆಯ ನುಡಿಯ ಮೂಲಕ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಾಯಿತ್ರಿ, ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ, ದಿವ್ಯ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ನರೇಂದ್ರಕುಮಾರ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.
ಕೊನೆಯಲ್ಲಿ ಕಾರ್ಯಕ್ರಮದ ಪ್ರತಿಜ್ಞಾವಿಧಿಯನ್ನು ಮೇಲ್ವಿಚಾರಕಿ ವಿಜಯ ಎಂ ಬೋಧಿಸಿದರು. ಮೇಲ್ವಿಚಾರಕಿ ವನಮಾಲ ವಂದಿಸಿದರು.