Hosanagara | ಮನೆಯಲ್ಲಿ ಕುಟುಂಬದಲ್ಲಿ ಸಾವಿರಾರು ಕಷ್ಟಗಳಿರುತ್ತದೆ ಅದನ್ನು ಮಕ್ಕಳ ಮೇಲೆ ಹೇರದೆ ವಿದ್ಯೆ ಕಲಿಯುವ ಸಂದರ್ಭದಲ್ಲಿ ಮಕ್ಕಳಿಗೆ ವಿದ್ಯೆ ಕಲಿಸಿ ಎಂದು ಇಲ್ಲಿನ ನ್ಯಾಯಾಲಯದ ಪ್ರಧಾನ ವ್ಯವಹಾರ ನ್ಯಾಯಾಧೀಶ ಮಾರುತಿ ಶಿಂಧೆ ಹೇಳಿದರು.
ಪಟ್ಟಣದ ಪದವಿ ಪೂರ್ವ ಕಾಲೇಜಿನ ಹೈಸ್ಕೂಲ್ ವಿಭಾಗದಲ್ಲಿ ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆಯನ್ನು ಆಚರಿಸಲಾಗಿದ್ದು ಈ ಸಂದರ್ಭದಲ್ಲಿ ಅವರು ಮಾತನಾಡಿದರು.
ಪ್ರತಿಯೊಬ್ಬ ಮಗುವೂ ವಿದ್ಯೆಯನ್ನು ಕಲಿಯುವ ಸಂದರ್ಭದಲ್ಲಿ ಪೋಷಕರು ವಿದ್ಯೆಯ ಕಡೆಗೆ ಹೆಚ್ಚು ಕಲಿಸುವ ಕಡೆಗೆ ಗಮನ ಹರಿಸಬೇಕು. ಅದನ್ನು ಬಿಟ್ಟು 14 ವರ್ಷದ ಒಳಗಿನ ಮಗುವಿಗೆ ದುಡಿಯಲು ಕಳುಹಿಸಿದರೇ ಆ ಮಗುವು ಸಣ್ಣ ವಯಸ್ಸಿನಲ್ಲಿಯೇ ದುಶ್ಚಟಕ್ಕೆ ಬಲಿಯಾಗುವ ಸಂಭವವಿದೆ. ಅದು ಅಲ್ಲದೇ 14ವರ್ಷದ ಒಳಗಿನ ಮಕ್ಕಳನ್ನು ಕೆಲಸಕ್ಕೆ ಕಳುಹಿಸುವ ಪೋಷಕರಿಗೂ ಹಾಗೂ ಯಾರು ಕೆಲಸಕ್ಕೆ ಸೇರಿಸಿಕೊಳ್ಳುತ್ತಾರೋ ಅಂತಹ ವ್ಯಕ್ತಿಗೂ ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂದರು.
ಮಕ್ಕಳನ್ನು ಉತ್ತಮ ಪ್ರಜೆಯನ್ನಾಗಿ ಮಾಡಿ :
ಸಂಸಾರದಲ್ಲಿ ಕಷ್ಟ ಸರ್ವೆ ಸಾಮಾನ್ಯ ಅದನ್ನು ಮಕ್ಕಳ ಮೇಲೆ ಹೇರಬಾರದು ಕಷ್ಟುಗಳು ಬಂದಾಗ ಮಕ್ಕಳನ್ನು ಶಾಲೆ ಬಿಡಿಸಿ ದುಡಿಮೆಗೆ ಹಾಕಬೇಡಿ ನಿಮ್ಮ ಮಕ್ಕಳ ಭವಿಷ್ಯವನ್ನು ನೀವೇ ಹಾಳು ಮಾಡಿದಂತಾಗುತ್ತದೆ ಒಂದು ಮಗುವನ್ನು ಓದಿಸಿ ಬರೆಸಿ ಕಲಿಸಿ ಈ ಭವ್ಯ ಭಾರತದ ಆಸ್ತಿಯನ್ನಾಗಿ ಮಾಡಬೇಕೆಂದು ಮಕ್ಕಳ ಪೋಷಕ ವರ್ಗದವರಿಗೆ ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಚಂದ್ರಪ್ಪ ಬಾಲ ಕಾರ್ಮಿಕ ಪದ್ದತಿಯ ಬಗ್ಗೆ ವಿವರಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಆರ್. ಕೃಷ್ಣಮೂರ್ತಿ ವಹಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ತಾಲ್ಲೂಕು ದೈಹಿಕ ಶಿಕ್ಷಕರಾದ ಬಾಲಚಂದ್ರ, ಸಹಾಯಕ ಸಂಯೋಜಕರಾದ ರವಿ ಕೆ, ಮುಖ್ಯ ಶಿಕ್ಷಕರಾದ ರೇಣುಕೇಶ್, ವಕೀಲರ ಸಂಘದ ಅಧ್ಯಕ್ಷ ಚಂದ್ರಪ್ಪ, ನ್ಯಾಯಾಲಯದ ಸಿಬ್ಬಂದಿ ರೇಖಾ ಹರೀಶ್, ಅದಾಲತ್ ಗುರುರಾಜ್, ಶಾಲೆಯ ಶಿಕ್ಷಕ ವರ್ಗ ಇನ್ನೂ ಮುಂತಾದವರು ಉಪಸ್ಥಿತರಿದ್ದರು.