HOSANAGARA ; ಯಾವುದೇ ಸಂಘಟನೆಗಳ ಪದಾಧಿಕಾರಿಗಳು ಸಮವಸ್ತ್ರ ಧರಿಸುವುದು ಸಂಘಟನೆಯ ಒಗ್ಗಟನ್ನು ಪ್ರದರ್ಶಿಸುತ್ತದೆ ಎಂದು ತಾಲೂಕಿನ ಜೇನಿ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಅಕ್ಷತಾ ನಾಗರಾಜ್ ಅಭಿಪ್ರಾಯಪಟ್ಟರು.
ಇಲ್ಲಿನ ಹೆಬೈಲು ಸರ್ಕಲ್ ನಲ್ಲಿ ಕಾಳಿಕಾಪುರದ ಶ್ರೀ ಗಜಾನನ ಯುವಕ ಸೇವಾ ಸಮಿತಿ ಆಯೋಜಿಸಿರುವ 15ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮದ ಪದಾಧಿಕಾರಿಗಳಿಗೆ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಕೊಡುಗೆಯಾಗಿ ನೀಡಿದ್ದ ‘ಟೀ ಶರ್ಟ್’ ಅನ್ನು ವಿತರಿಸಿ ಅವರು ಮಾತನಾಡಿದರು.
ಕಳೆದ 3 ವರ್ಷಗಳಿಂದೀಚೆಗೆ ಸಮಿತಿಯು ಅದ್ದೂರಿ ಗಣೇಶೋತ್ಸವ ನಡೆಸಲು ಮುಂದಾಗಿದೆ. ಸಂಘಟನೆಯ ಸಂಕೇತವಾದ ಈ ನಾಡಹಬ್ಬಕ್ಕೆ ಸಾರ್ವಜನಿಕರು ನೆರವು ನೀಡುವ ಮೂಲಕ ಕೈ ಜೋಡಿಸುವಂತೆ ಕರೆ ನೀಡಿದರು.
ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಮಾತನಾಡಿ, ಮೂರು ದಿನಗಳ ಈ ಗಣಪತಿ ಪ್ರತಿಷ್ಠಾನ ಕಾರ್ಯಕ್ರಮದಲ್ಲಿ ರಂಗೋಲಿ ಸ್ಪರ್ಧೆ, ಆಟೋಟ ಸ್ಪರ್ಧೆ, ವಿವಿಧ ಮನರಂಜನಾ ಕಾರ್ಯಕ್ರಮಗಳ ಜೊತೆಗೆ ಸತ್ಯ ನಾರಾಯಣ ಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದರು.
ಶಾಸಕ ಬೇಳೂರು ಗೋಪಾಲಕೃಷ್ಣ ಅಭಿಮಾನಿ ಬಳಗದ ಜಂಬಳ್ಳಿ ಮಾಧವಶೆಟ್ಟಿ, ಸಮಿತಿಯ ಕಾರ್ಯದರ್ಶಿ ವಿವೇಕ್, ಖಜಾಂಚಿ ನಾಗರಾಜ್, ಅಭಿಷೇಕ್, ಆದಿತ್ಯ, ಅಕ್ಷಯ್, ಗಣೇಶ, ಶಿವಕುಮಾರ್, ಜೋಯಲ್ ಬಾಂಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.