RIPPONPETE | ಅತಿಶಯ ಶ್ರೀಕ್ಷೇತ್ರದ ಭಗವಾನ ಶ್ರೀ 1008 ಪಾರ್ಶ್ವನಾಥ ಸ್ವಾಮಿ, ಅಭೀಷ್ಠವರ ಪ್ರಸಾದಿನೀ ಜಗನ್ಮಾತೆ ಶ್ರೀ ಪದ್ಮಾವತಿ ದೇವಿಯ ನಾಲ್ಕನೇಯ ಶುಕ್ರವಾರದ ದರ್ಶನ, ಪೂಜೆ ಸಮರ್ಪಣೆ ಹಾಗೂ ಭೋಜನ ಸೇವೆಯನ್ನು ಮಾಡುವುದಕ್ಕಾಗಿ ಐನಾಪುರ, ಅಥಣಿ, ಶಿರಹಟ್ಟಿ ಹಾಗೂ ದುಂಡಶಿ ಜೈನ ಸಮಾಜದ ಶ್ರಾವಕರು ಕಾಲ್ನಡಿಗೆಯಲ್ಲಿ ಕ್ರಮಿಸಿ ಬುಧವಾರ ಸಂಜೆ ಹೊಂಬುಜ ಕ್ಷೇತ್ರಕ್ಕೆ ಆಗಮಿಸಿದ್ದರು.
ಶ್ರೀಮಠದ ವತಿಯಿಂದ ಆತ್ಮೀಕವಾಗಿ ಸ್ವಾಗತಿಸಿ, ಗಜರಾಣಿ ಐಶ್ವರ್ಯ ನಮಸ್ಕರಿಸಿದ ಕ್ಷಣ ಅಭೂತಪೂರ್ವವಾಗಿತ್ತು. ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರು ಶ್ರೀಕ್ಷೇತ್ರದ ಭಕ್ತರಾಗಿ ಆಗಮಿಸಿದ ಸರ್ವರನ್ನೂ ಅಭಿನಂದಿಸಿ, ಆಶೀರ್ವಾದ ನೀಡಿದರು.
ಶ್ರಾವಣ ಮಾಸದ ಅಂತಿಮ ಶುಕ್ರವಾರದ ವಿಶೇಷ ಪೋಡಶೋಪಚಾರ ಪೂಜೆ, ಅಲಂಕಾರ ಪೂಜೆ ಪರಂಪರಾನುಗತ ಜಿನಾಗಮ ಪೂಜಾ ಧಾರ್ಮಿಕ ವಿಧಿ-ವಿಧಾನಗಳು ಶ್ರಾವಕರ ಕುಟುಂಬಸ್ಥರಿಗೆ ಕ್ಷೇಮವನ್ನುಂಟು ಮಾಡಲಿ. ಐತಿಹಾಸಿಕ ಧಾರ್ಮಿಕ ಪುಣ್ಯಧಾಮವಾಗಿರುವ ಹುಂಚ ಶ್ರೀಕ್ಷೇತ್ರದ ಅಭಿವೃದ್ಧಿಗೆ ಸಹಾಯ-ಸಹಕಾರ ನೀಡುವ ಎಲ್ಲ ಸಮಾಜ ಬಾಂಧವರೂ ಶ್ರೀಕ್ಷೇತ್ರದ ಅವಿಭಾಜ್ಯ ಅಂಗವಾಗಿ ಅಭೀಷ್ಠವರ ಪ್ರಸಾದಿನಿ ಯಕ್ಷಿ ಶ್ರೀ ಪದ್ಮಾವತಿ ದೇವಿಯ ನಾಮ ಸ್ಮರಣೆಯಿಂದ ಬಾಳನ್ನು ಬೆಳಗಿಸಿ ಎಂದು ಪ್ರವಚನದಲ್ಲಿ ತಿಳಿಸಿದರು. ಭಕ್ತಿಯ ನಡಿಗೆ ಜೀವನದಲ್ಲಿ ಶುಭ ಫಲಶ್ರುತಿ ನೀಡಲೆಂದು ಹರಸಿದರು. ಅಥಣಿ, ಐನಾಪುರ, ಶಿರಹಟ್ಟಿಯಿಂದ 150 ಜನ ಶ್ರಾವಕ ಬಂಧುಗಳು ಹಾಗೂ ದುಂಡಶಿ ಗ್ರಾಮದ 50 ಜನ ಶ್ರಾವಕರು ಆಗಮಿಸಿದ್ದರು.
ಕಾಗವಾಡ ತಾಲ್ಲೂಕಿನ ಐನಾಪುರ, ಶೇಡಬಾಳ, ಹಾಗೂ ಶಿರಹಟ್ಟಿ ಗ್ರಾಮಗಳ ಜೈನ ಶ್ರಾವಕರು ಕಾಲ್ನಡಿಗೆಯ ಮೂಲಕ ಹೊಂಬುಜ ಕ್ಷೇತ್ರಕ್ಕೆ ಪಾದಯಾತ್ರೆ ಕೈಗೊಂಡಿದ್ದು ಶ್ರದ್ಧಾ ಭಕ್ತಿಗೆ ಸಾಕ್ಷಿಯಾಗಿದೆ ಎಂದು ಬೆಳಗಾವಿಯ ನ್ಯಾಯವಾದಿ ಸಂಜಯ ಕುಚನೂರೆ ಈ ಸಂದರ್ಬದಲ್ಲಿ ತಿಳಿಸಿದ್ದಾರೆ.
ಸದೃಢ ಸಮಾಜ ನಿರ್ಮಾಣಕ್ಕಾಗಿ ಪ್ರತಿಯೊಬ್ಬರು ಪಣತೊಡಬೇಕು ಎಂಬ ಆಶಯದೊಂದಿಗೆ ಆ ನಿಟ್ಟಿನಲ್ಲಿ ಕಳೆದ ಹದಿಮೂರು ವರ್ಷಗಳಿಂದ ನಿರಂತರವಾಗಿ ಪಾದಯಾತ್ರೆ ಮೂಲಕ ಜನಜಾಗೃತಿಗೊಳಿಸುತ್ತಿರುವುದು ವಿಶೇಷ.