RIPPONPETE | ಗೌರಿ-ಗಣೇಶ ಮತ್ತು ಈದ್ ಮಿಲಾದ್ ಹಬ್ಬವನ್ನು ಶಾಂತಿ ಸೌಹಾರ್ದತೆಯಿಂದ ಊರಹಬ್ಬವನ್ನಾಗಿ ಆಚರಿಸುವಂತಾಗಬೇಕು. ಈ ಹಬ್ಬದಲ್ಲಿ ಡಿಜೆಯಂತಹ ಕರ್ಕಶವಾದ ಹೆಚ್ಚು ಸೌಂಡ್ ಮಾಡುವಂತಹ ಸ್ಪೀಕರ್ ಬಳಸುವುದರಿಂದ ಅನಾರೋಗ್ಯ ಪೀಡಿತರಿಗೆ ಅಪಾಯವಾಗುವ ಸಂಭವವೇ ಹೆಚ್ಚು. ಆದ್ದರಿಂದಾಗಿ ಡಿಜೆ ಬಳಕೆ ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ಹೊಸನಗರ ವೃತ್ತ ನಿರೀಕ್ಷಕ ಗುರಣ್ಣ ಎಸ್ ಹೆಬ್ಬಾಳ್ ತಿಳಿಸಿದರು.
ಇಲ್ಲಿನ ಗ್ರಾಮ ಪಂಚಾಯಿತಿಯ ಕುವೆಂಪು ಸಭಾಭವನದಲ್ಲಿ ಪೊಲೀಸ್, ಕಂದಾಯ ಇಲಾಖೆಯವರು ಆಯೋಜಿಸಲಾದ “ಗೌರಿ-ಗಣೇಶ ಮತ್ತು ಈದ್ ಮಿಲಾದ್’’ ಹಬ್ಬದ ಶಾಂತಿ ಸಮಿತಿ ಸಭೆಯಲ್ಲಿ ಭಾಗವಹಿಸಿ, ಕಾನೂನು ಸುವ್ಯವಸ್ಥೆಯೊಂದಿಗೆ ಸಾರ್ವಜನಿಕರಿಗೆ ಹೆಚ್ಚು ಕಿರಿಕಿರಿಯಾಗದಂತೆ ಮತ್ತು ಗಣಪತಿ ಪೆಂಡಾಲ್ ಬಳಿ ಸಮಿತಿಯವರು ಕಡ್ಡಾಯವಾಗಿ ಇರುವುದು ಮತ್ತು ಎಲೆಕ್ಟ್ರಾನಿಕ್ ಬಳಕೆಯ ಬಗ್ಗೆ ಮುನ್ನೆಚ್ಚರಿಕೆ ಕ್ರಮ ವಹಿಸುವುದರ ಬಗ್ಗೆ ತಿಳುವಳಿಕೆ ನೀಡಿ, ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಮಾರ್ಗದ ನೀಲನಕ್ಷೆ ಹೀಗೆ ತಾವು ಕಳೆದ ವರ್ಷದಲ್ಲಿ ಮಾಡಿದಂತೆ ನಡೆದುಕೊಂಡು ಬರುವಂತೆ ಸಲಹೆ ಸೂಚನೆಗಳನ್ನು ನೀಡಿದರು.
ತಹಶೀಲ್ದಾರ್ ರಶ್ಮಿ ಹಾಲೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ತಮ್ಮ ಊರಿನ ಹಬ್ಬ ತಾವು ಶಾಂತಿ ಸೌಹಾರ್ದತೆಯೊಂದಿಗೆ ಹಿಂದು, ಮುಸ್ಲಿಂ ಭಾವೈಕ್ಯತೆಯಿಂದ ಎರಡು ಧರ್ಮದವರು ಆಚರಿಸುವಂತಾಗಬೇಕು. ಅಲ್ಲದೆ ಗೌರಿ-ಗಣೇಶ ಮತ್ತು ಈದ್ ಮಿಲಾದ್ ಹಬ್ಬದಲ್ಲಿ ವೈಯಕ್ತಿಕ ವಿಚಾರವನ್ನು ತಂದು ಅಶಾಂತಿ ಸೃಷ್ಟಿಸುವವರ ವಿರುದ್ಧ ಮುಲಾಜಿಲ್ಲದೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಲಾಗುವುದೆಂದು ತಿಳಿಸಿ, ಹಬ್ಬವನ್ನು ಸಂಭ್ರಮದೊಂದಿಗೆ ಎಲ್ಲರೂ ಒಂದುಗೂಡಿ ಆಚರಿಸಲು ಸೂಚಿಸಿ, ನಮ್ಮನ್ನು ಕಾನೂನು ಪಾಲನೆಗೆ ಕರೆಯಬೇಡಿ ಹಬ್ಬಕ್ಕೆ ಕರೆಯಿರಿ, ಗಣಪತಿ ವಿಸರ್ಜನ ಸಮಯದಲ್ಲಿ ಮಹಿಳೆಯರು ಮತ್ತು ಯುವತಿಯರು ನೃತ್ಯ ಮಾಡುವ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನಚ್ಚರಿಕೆ ಕ್ರಮವನ್ನು ಸಮಿತಿಯವರು ವಹಿಸಿಕೊಳ್ಳುವಂತೆ ಸೂಚಿಸಿದರು.
ಈ ಸಭೆಯಲ್ಲಿ ಆರ್.ಎ.ಚಾಬುಸಾಬ್, ಆರ್.ಎನ್.ಮಂಜುನಾಥ, ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ಸಮಿತಿಯ ಅಧ್ಯಕ್ಷ ರಾಮಚಂದ್ರ ಬಳೆಗಾರ್, ಎಂ.ಬಿ.ಮಂಜುನಾಥ, ಎಂ.ಸುರೇಶ್ ಸಿಂಗ್, ಜುಮ್ಮಾಮಸೀದಿಯ ಅಧ್ಯಕ್ಷ ಹಸನಬ್ಬ, ಆಶೀಫ್,ಉಬೇದುಲ್ಲಾ ಷರೀಫ್, ನರಸಿಂಹ, ಜೆ.ಜಿ.ಸದಾನಂದ ಸಾರ್ವಜನಿಕರ ಪರವಾಗಿ ಹಲವು ಸಲಹೆಗಳನ್ನು ನೀಡಿದರು.
ಅಗ್ನಿಶಾಮಕ ಇಲಾಖೆ, ಪಿಡಬ್ಲೂಡಿ, ಮೆಸ್ಕಾಂ, ಕಂದಾಯ ತಾಲ್ಲೂಕು ಪಂಚಾಯತ್ ಗ್ರಾಮ ಪಂಚಾಯತ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿ ವರ್ಗದವರು ಹಾಜರಿದ್ದರು.
ಪಿಎಸ್ಐ ಎಸ್.ಪಿ. ಪ್ರವೀಣ್ ಸ್ವಾಗತಿಸಿ, ವಂದಿಸಿದರು.