RIPPONPETE | ಸಾಲ ಬಾಧೆಯಿಂದ ಮನನೊಂದು ರೈತನೊಬ್ಬ (Farmer) ನೇಣು (Hang) ಬಿಗಿದುಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡ ಘಟನೆ ಶಿವಮೊಗ್ಗ (Shivamogga) ಜಿಲ್ಲೆಯ ಹೊಸನಗರ ತಾಲೂಕಿನ ಬಾಳೂರು ಗ್ರಾಪಂ ವ್ಯಾಪ್ತಿಯ ಕಾಳೇಶ್ವರ ಗ್ರಾಮದಲ್ಲಿ ನಡೆದಿದೆ.
ಕಾಳೇಶ್ವರ ಗ್ರಾಮದ ಧನಂಜಯಪ್ಪ (73) ಮೃತ ನೇಣಿಗೆ ಶರಣಾದ ರೈತ. ಈತ ತನ್ನ ಜಮೀನಿನಲ್ಲಿ ಬೆಳೆ ಬೆಳೆಯುವ ಉದ್ದೇಶದಿಂದ ರಿಪ್ಪನ್ಪೇಟೆ ಕೆನರಾ ಬ್ಯಾಂಕ್ನಲ್ಲಿ ₹ 8.36 ಲಕ್ಷ, ಡಿಸಿಸಿ ಬ್ಯಾಂಕ್ನಲ್ಲಿ ₹ 40 ಸಾವಿರ, ಧರ್ಮಸ್ಥಳ ಸಂಘದಲ್ಲಿ ₹ 1 ಲಕ್ಷ, ಎಲ್.ಎನ್.ಟಿ ಸಂಸ್ಥೆಯಲ್ಲಿ ₹ 90 ಸಾವಿರ, ಬಿಎಸ್ಎಸ್ ಸಂಸ್ಥೆಯಲ್ಲಿ ₹ 80 ಸಾವಿರ ಹಾಗೂ ಚೈತನ್ಯ ಇಂಡಿಯಾ ಸಂಸ್ಥೆಯಲ್ಲಿ ₹ 80 ಸಾವಿರದಂತೆ ಒಟ್ಟು ₹ 12.26 ಲಕ್ಷ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.
ಕಳೆದ ಬಾರಿ ಕಡಿಮೆ ಮಳೆಯಿಂದಾಗಿ ಭತ್ತದ ಬೆಳೆ ನಾಶವಾಗಿ ಸರಿಯಾದ ಫಸಲು ಕೈ ಸೇರಿರಲಿಲ್ಲ. ಒಂದೂವರೆ ಎಕರೆ ಪ್ರದೇಶದಲ್ಲಿ ಶುಂಠಿ ಬೆಳೆ ಬೆಳೆದಿದ್ದರು ಇದು ಕೂಡ ಕೊಳೆ ರೋಗ ಬಂದು ನಾಶವಾಗಿ ಬೆಳೆ ನಷ್ಟವುಂಟಾಗಿತ್ತು ಹಾಗೂ ಈ ಬಾರಿ ಅತಿಯಾದ ಮಳೆಯಿಂದಾಗಿ ಅಡಿಕೆ ತೋಟಕ್ಕೆ ಕೊಳೆ ರೋಗ ಆವರಿಸಿ ನಷ್ಟವುಂಟಾಗುವ ಭೀತಿ ಎದುರಾಗಿತ್ತು.
ಸಾಲ ಸಕಾಲಕ್ಕೆ ತೀರಿಸಲು ಸಾಧ್ಯವಾಗದೇ ಇದ್ದುದ್ದರಿಂದ ಮನನೊಂದಿದ್ದ ಈತ ಆಗಾಗ್ಗೆ ಕುಟುಂಬದವರಲ್ಲಿ ಸಾಲ ತೀರುವಳಿಯ ಬಗ್ಗೆ ಹೇಳಿಕೊಳ್ಳುತ್ತಿದ್ದರು ಎನ್ನಲಾಗಿದೆ.
ಸೋಮವಾರ ರಾತ್ರಿ 10:00 ಗಂಟೆ ಸುಮಾರಿಗೆ ತೋಟಕ್ಕೆ ಹೋಗಿದ್ದ ಧನಂಜಯಪ್ಪ ಮನೆಗೆ ಬಾರದೇ ಇದ್ದುದ್ದರಿಂದ ಕುಟುಂಬಸ್ಥರು ಹುಡುಕಾಟ ನಡೆಸಿದಾಗ ಅಡಿಕೆ ತೋಟದ ಹತ್ತಿರ ಮಾವಿನ ಮರದ ರೆಂಬೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವುದು ಕಂಡುಬಂದಿದೆ.
ಈ ಘಟನೆ ಸಂಬಂಧ ರಿಪ್ಪನ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.