ಶಿವಮೊಗ್ಗ : ಇನ್ಜಂಕ್ಷನ್ ಆರ್ಡರ್ ಇದ್ದ ಜಮೀನಿಗೆ ತೆರಳಿದಕ್ಕೆ ಕುಡುಗೋಲಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಶಿವಮೊಗ್ಗ ತಾಲೂಕಿನ ದುಮ್ಮಳ್ಳಿಯಲ್ಲಿ ಸೋಮವಾರ ನಡೆದಿದೆ.
ವಿಡಿಯೋ ನೋಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://www.facebook.com/share/v/P1BUHx9b5QF3Nr4C/?mibextid=qi2Omg
ಕೊಲೆಯಾದ ವ್ಯಕ್ತಿಯನ್ನು ಸತೀಶ್ ನಾಯ್ಕ (28) ಎಂದು ಗುರುತಿಸಲಾಗಿದೆ. ದೂರದ ಸಂಬಂಧಿ ಅಖಿಲೇಶ್ (27) ಸೇರಿದಂತೆ ಹಲವರ ಗುಂಪು ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಕೊಲೆ ನಡೆದ ಜಮೀನಿನ ವ್ಯಾಜ್ಯವು ಕಳೆದ ಹಲವಾರು ವರ್ಷಗಳಿಂದ ವಿವಾದದಲ್ಲಿತ್ತು. ನ್ಯಾಯಾಲಯವು ಈ ಜಮೀನಿನೊಳಗೆ ಯಾರೂ ಕೂಡ ತೆರಳದಂತೆ ಇನ್ಜಂಕ್ಷನ್ ಆದೇಶ ನೀಡಿತ್ತು.
ಮೇ.13 ರಂದು ಬೆಳಿಗ್ಗೆ ಸತೀಶ್ ನಾಯ್ಕ ಈ ಜಮೀನಿಗೆ ತೆರಳಿದ್ದರು ಎನ್ನಲಾಗಿದ್ದು, ಈ ವೇಳೆ ಅಖಿಲೇಶ್ ಗುಂಪಿನೊಂದಿಗೆ ಮಾತಿಗೆ ಮಾತು ಬೆಳೆದಿದೆ. ಸ್ಥಳದಲ್ಲಿದ್ದ ಕುಡುಗೋಲಿನಿಂದ ಗುಂಪು ಹಲ್ಲೆ ನಡೆಸಿದ ಪರಿಣಾಮ ಸತೀಶ್ ನಾಯ್ಕ ಕೊಲೆಯಾಗಿದೆ ಎಂದು ತಿಳಿದು ಬಂದಿದೆ.
ಮೆಗ್ಗಾನ್ ಆಸ್ಪತ್ರೆಯ ಶವಗಾರದಲ್ಲಿ ಶವ ಇರಿಸಲಾಗಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟನಾ ಸ್ಥಳಕ್ಕೆ ಎಸ್ಪಿ ಮಿಥುನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.