ರಿಪ್ಪನ್ಪೇಟೆ: ದ್ವಿಚಕ್ರ ವಾಹನಗಳಲ್ಲಿ 9 ತಿಂಗಳಿನಿಂದ ಮೇಲ್ಪಟ್ಟ ಎಲ್ಲ ಮಕ್ಕಳನ್ನು ಕರೆದೊಯ್ಯವಾಗ ಮಕ್ಕಳಿಗೆ ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದೆ ಎಂದು ರಿಪ್ಪನ್ಪೇಟೆ ಪಿಎಸ್ಐ ಕೆ.ವೈ.ನಿಂಗರಾಜ್ ಹೇಳಿದರು.
ಇಲ್ಲಿನ ವಿನಾಯಕ ವೃತ್ತದಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ಮತ್ತು ತೀರ್ಥಹಳ್ಳಿ ಉಪ ವಿಭಾಗ ಹೊಸನಗರ ವೃತ್ತ ನಿರೀಕ್ಷಕರು ಮತ್ತು ರಿಪ್ಪನ್ಪೇಟೆ ಪೊಲೀಸ್ ಠಾಣೆ ಇವರ ಸಹಯೋಗದಲ್ಲಿ ಆಟೋ ಚಾಲಕರು ಮತ್ತು ದ್ವಿಚಕ್ರ ವಾಹನ ಚಾಲಕರುಗಳಿಗಾಗಿ ಆಯೋಜಿಸಲಾದ “ರಸ್ತೆ ಸುರಕ್ಷತಾ ಜನ ಜಾಗೃತಿ ಜಾಥಾ’’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಕ್ಕಳ ಜೀವ ಅಮೂಲ್ಯವಾದ್ದು. ಮುಗ್ದ ಮನಸ್ಸುಗಳ ಕನಸುಗಳನ್ನು ಬಾಲ್ಯದಲ್ಲಿಯೇ ಚವುಟದಿರಿ. ನಿಮ್ಮ ಮಕ್ಕಳ ಭವಿಷ್ಯ ಮತ್ತು ಸುರಕ್ಷತೆಗಾಗಿ ಕಡ್ಡಾಯವಾಗಿ ಹೆಲ್ಮೆಟ್ ಹಾಗೂ ಸೇಷ್ಟಿ ಹಾರ್ನೆಸ್ ಬಳಸುವುದರ ಬಗ್ಗೆ ಕರ್ನಾಟಕ ಉಚ್ಚನ್ಯಾಯಾಲಯದ ಆದೇಶದಂತೆ ಚಾಲಕರು ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಬಳಕೆ ಮಾಡುವ ಕುರಿತು ಜಾಗೃತಿ ನಡೆಸಲಾಗುತ್ತಿದೆ ಎಂದರು.
ಅಲ್ಲದೆ ದ್ವಿಚಕ್ರ ವಾಹನದಲ್ಲಿ ಸವಾರರಿಬ್ಬರೂ ಹೆಲ್ಮೆಟ್ ಧರಿಸುವುದು. ಕಡ್ಡಾಯವಾಗಿ ಚಾಲನ ಪರವಾನಿಗೆ ವಿಮೆ ಪತ್ರ ಹೊಗೆ ತಪಾಸಣೆ ದಾಖಲಾತಿಗಳನ್ನು ಕಡ್ಡಾಯವಾಗಿ ವಾಹನದಲ್ಲಿಡುವುದು ಮತ್ತು ವಾಹನ ಚಲಾವಣೆಯ ಸಂದರ್ಭದಲ್ಲಿ ಮದ್ಯಪಾನ ಮಾಡಿ ಚಲಾವಣೆ ಮಾಡಿದರೆ 10 ಸಾವಿರದಿಂದ 25 ಸಾವಿರ ರೂ.ವರೆಗೆ ದಂಡ ಹಾಕುವುದರೊಂದಿಗೆ ಚಾಲನ ಪರವಾನಿಗೆ ಅಮಾನತು ಪಡಿಸಲಾಗುವುದು. ದ್ವಿಚಕ್ರ ವಾಹನದಲ್ಲಿ ತ್ರಿಬಲ್ ರೈಡಿಂಗ್ ನಿಷೇಧಿಸಿದೆ. ವಾಹನ ಚಾಲನ ವೇಳೆ ಮೊಬೈಲ್ ಬಳಕೆಯನ್ನು ಸಹ ನಿಷೇಧಿಸಲಾಗಿದ್ದು ಅಪ್ರಾಪ್ತರಿಗೆ ವಾಹನ ಚಲಾಯಿಸಲು ನೀಡುವ ಪೋಷಕರಿಗೆ 25 ಸಾವಿರ ರೂ. ದಂಡ ಮತ್ತು ಕೇಸ್ ದಾಖಲಿಸಲಾಗುವುದೆಂದು ಹೇಳಿದ ಅವರು, ಈ ಎಲ್ಲಾ ಸಾರಿಗೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ವಾಹನ ಚಾಲಕರಿಗೆ ತಿಳುವಳಿಕೆ ನೀಡಿದರು.
ಈ ಸಂದರ್ಭದಲ್ಲಿ ಎಎಸ್ಐ ಮಂಜಪ್ಪ, ಸಿಬ್ಬಂದಿಗಳಾದ ಉಮೇಶ್, ಯೋಗೇಶ್, ರಮೇಶ್, ಮಧುಸೂದನ್, ಶಿವಪ್ಪ ಇನ್ನಿತರರು ಹಾಜರಿದ್ದರು.