HOSANAGARA | ಪ್ರಕೃತಿ ಹಾಗೂ ವಾತಾವರಣ ಸಹಕರಿಸಿದಲ್ಲಿ ಮಾತ್ರವೇ ಕೃಷಿಕ ಲಾಭದತ್ತ ಮುಖ ಮಾಡಲು ಸಾಧ್ಯವೆಂದು ತಾಲೂಕಿನ ಪ್ರಗತಿಪರ ಹಿರಿಯ ಕೃಷಿಕ ತೊಗರೆ ಸುಬ್ಬಾಭಟ್ಟ ತಿಳಿಸಿದರು.
ತಾಲೂಕಿನ ತ್ರಿಣಿವೆ ಗ್ರಾಮ ಪಂಚಾಯತಿ ವ್ಯಾಪ್ತಿಯ ತೊಗರೆ ಗ್ರಾಮದ ಪ್ರಗತಿಪರ ಕೃಷಿಕ ಸುಬ್ಬಾಭಟ್ಟ ಅವರ ಕೃಷಿ ಭೂಮಿಯಲ್ಲಿ ಕೃಷಿ ಇಲಾಖೆ ಹಮ್ಮಿಕೊಂಡಿದ್ದ ಡ್ರಮ್ ಸೀಡರ್ ಬಳಸಿ ಭತ್ತದ ನೇರ ಬಿತ್ತನೆ ಕುರಿತಾದ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿಡಿಯೋ ನೋಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. https://www.facebook.com/share/v/4PqasTWZR7KsrvgM/
ದಶಕಗಳ ಹಿಂದೆ ಭತ್ತ ನೆಟ್ಟಿ ಕಾರ್ಯವು ಅಗೆ ಹಾಕಿ ಸಸಿ ನೆಡಲಾಗುತ್ತಿತ್ತು. ನಂತರದಲ್ಲಿ ಭತ್ತದ ಮ್ಯಾಟ್ಗಳನ್ನು ಮಿಷನ್ ಮೂಲಕ ನೆಡಲಾಯ್ತು. ಈ ಎಲ್ಲಾ ಕೆಲಸದಲ್ಲಿ ಹೆಚ್ಚು ಸಮಯ, ಹಣ ವ್ಯಯವಾಗುತ್ತಿತ್ತು. ಇತ್ತೀಚೆಗೆ, ಆಧುನಿಕ ಆವಿಷ್ಕಾರವಾದ ಡ್ರಮ್ ಸೀಡರ್ ಮೂಲಕ ಭತ್ತ ನೇರ ಬಿತ್ತನೆ ಉತ್ತಮ ಫಲನೀಡುತ್ತಿದೆ. ಸಮಯ, ಹಣ ಸಹ ಉಳಿತಾಯ ಆಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಈ ಪದ್ದತಿಯು ಹೆಚ್ಷು ಜನಮನ್ನಣೆ ಗಳಿಸುತ್ತಿದ್ದು ರೈತಾಪಿಗಳಿಗೆ ವರದಾನವಾಗಿದೆ ಎಂದರು.
ದುಬಾರಿ ಯಂತ್ರಗಳ ಮೂಲಕ ಭತ್ತ ನಾಟಿ ಕಾರ್ಯಕ್ಕೆ ರೈತರು ಮುಂದಾಗುವ ಬದಲು ಕಡಿಮೆ ಖರ್ಚಿನಲ್ಲಿ ಡ್ರಮ್ ಸೀಡರ್ ಬಳಸಿ ಭತ್ತದ ನಾಟಿ ಕಾರ್ಯ ಪೂರ್ಣಗೊಳಿಸಲು ಈ ತಂತ್ರಜ್ಞಾನ ಸಹಕಾರಿ ಆಗಿದೆ ಎಂದು ಕೃಷಿ ಇಲಾಖೆಯ ಆತ್ಮ ಯೋಜನೆಯ ತಾಲೂಕು ತಾಂತ್ರಿಕ ವ್ಯವಸ್ಥಾಪಕ ಸುನಿಲ್ ರೈತಾಪಿ ವರ್ಗಕ್ಕೆ ಕರೆ ನೀಡಿದರು.
ಸುಮಾರು ನಾಲ್ಕು ಎಕರೆ ಭತ್ತದ ನೆಟ್ಟಿ ಕಾರ್ಯದ ಪ್ರಾತ್ಯಕ್ಷಿಕೆ ನಡೆಯಿತು. ಈ ಸಂದರ್ಭದಲ್ಲಿ ಕೃಷಿಕ ತೊಗರೆ ಪ್ರಸಾದ್ ಭಟ್, ತ್ರಿಣಿವೆ ಗ್ರಾ.ಪಂ. ಹಾಲಿ ಸದಸ್ಯ ತೊಗರೆ ಕೃಷ್ಣಮೂರ್ತಿ, ಪ್ರಗತಿಪರ ಕೃಷಿಕ ಕುಂಬತ್ತಿ ಕೃಷ್ಣಮೂರ್ತಿ, ಸುರೇಶ್ ಕಲ್ಕೆ, ಕೃಷಿ ಸಖಿ ಸುಪ್ರತಾ ಮಹೇಶ್, ಗ್ರಾಮಸ್ಥರಾದ ಟಿ.ಎನ್.ಕುಮಾರ್, ಶೇಖರ್ ಶೆಟ್ಟಿ, ಉಮೇಶ್, ಪ್ರಕಾಶ್, ಅಪೂರ್ವ ಸೇರಿದಂತೆ ಹಲವರು ಉಪಸ್ಥಿತರಿದ್ದರು.