RIPPONPETE | ಪಟ್ಟಣ ವ್ಯಾಪ್ತಿಯಲ್ಲಿನ ಜನರಿಗೆ ತೀವ್ರ ಜ್ವರ ಕಾಣಿಕೊಂಡಿದ್ದು ಕಳೆದ ಮೂರು ದಿನಗಳ ಹಿಂದೆ ಗೃಹಿಣಿಯೊಬ್ಬರು ತೀವ್ರ ಜ್ವರದ ಬಾಧೆಯಿಂದಾಗಿ ಶಿವಮೊಗ್ಗ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಬೆನ್ನಲ್ಲೇ ಇಂದು ಗ್ರಾಮಾಡಳಿತ ಪಟ್ಟಣದ ಸುತ್ತಮುತ್ತ ಡೆಂಗ್ಯೂ ಹರಡುವ ಸೊಳ್ಳೆಗಳ ನಾಶಕ್ಕೆ ಫಾಗಿಂಗ್ ಮಾಡಿದರು.
ಪಟ್ಟಣದ ವ್ಯಾಪ್ತಿಯಲ್ಲಿ ಕಳೆದ ಒಂದು ತಿಂಗಳಿಂದ ಡೆಂಗ್ಯೂ ಜ್ವರದ ಬಾಧೆಯಿಂದ ಸಾಕಷ್ಟು ಜನರು ಹೈರಾಣಾಗಿದ್ದು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸ್ವಚ್ಚತೆ ಇಲ್ಲದೇ ಇರುವುದೇ ಕಾರಣವಾಗಿದೆ. ಮಸೀದಿ ಹಿಂಭಾಗದಲ್ಲಿ ಹೋಟೆಲ್ ಮನೆಗಳ ಕಲುಷಿತ ನೀರು ಚರಂಡಿಯಲ್ಲಿ ಸರಾಗವಾಗಿ ಹರಿದು ಹೋಗದೆ ಕಲುಷಿತ ನೀರು ಚರಂಡಿಯಲ್ಲಿ ನಿಂತಿರುವುದು ಮತ್ತು ಶಿವಮೊಗ್ಗ ರಸ್ತೆಯ ಗ್ರಾಮ ಪಂಚಾಯ್ತಿ ಮುಂಭಾಗದಲ್ಲಿನ ಕೆನರಾ ಬ್ಯಾಂಕ್, ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗ ಹಾಗೂ ಹೊಸನಗರ, ತೀರ್ಥಹಳ್ಳಿ ರಸ್ತೆಯ ಇಕ್ಕೆಲದಲ್ಲಿನ ಚರಂಡಿಯಲ್ಲಿ ಕಲುಷಿತ ನೀರು ಹರಿದು ಹೋಗದೆ ಚರಂಡಿ ಬ್ಲಾಕ್ ಆಗಿರುವುದರಿಂದಾಗಿ ಸೊಳ್ಳೆಗಳ ಉತ್ಪತ್ತಿಯ ತಾಣವಾಗಿ ಜನರಲ್ಲಿ ಜ್ವರ ಉಲ್ಭಣವಾಗಲು ಕಾರಣವಾಗಿದೆ.
ಇತ್ತೀಚೆಗೆ ಮ.ಟೈ.ನಲ್ಲಿ “ಸೊಳ್ಳೆಗಳ ಉತ್ಪಾದನಾ ಕೇಂದ್ರವಾದ ರಿಪ್ಪನ್ಪೇಟೆ’’ ಎಂಬ ಶೀರ್ಷಿಕೆಯಡಿ ಪ್ರಕಟಗೊಂಡ ವರದಿಯಿಂದಾಗಿ ಗ್ರಾಮಾಡಳಿತ ಕಂದಾಯ ಇಲಾಖೆಯವರು ಎಚ್ಚೆತ್ತು ಚರಂಡಿಯನ್ನು ಸ್ವಚ್ಚಗೊಳಿಸಿದರು ಕೂಡಾ ಕಲುಷಿತ ನೀರು ಮಾತ್ರ ಸರಾಗವಾಗಿ ಹರಿದು ಹೋಗದೆ ಅಲ್ಲಿಯೆ ನಿಲ್ಲುವಂತಾಗಿದ್ದು ಅಲ್ಲದೆ ಸೊಳ್ಳೆಗಳ ನಾಶಕ್ಕೆ ಫಾಗಿಂಗ್ ಮಾಡಲಾಯಿತು.
ಮಹಿಳೆಯ ಸಾವಿನಿಂದಾಗಿ ಇಂದು ಪುನಃ ಗ್ರಾಮಾಡಳಿತದವರು ಪಟ್ಟಣದ ಸುತ್ತಮುತ್ತ ವಿನಾಯಕ ವೃತ್ತದಲ್ಲಿ ಸೊಳ್ಳೆಗಳ ನಿರ್ಮೂಲನೆಗಾಗಿ ಫಾಗಿಂಗ್ ಮಾಡುವ ಕಾರ್ಯದಲ್ಲಿ ತೊಡಗಿ ಊರ ತುಂಬ ಸೊಳ್ಳೆ ಔಷಧಿ ಸಿಂಪರಣೆ ಕಾರ್ಯದಿಂದ ರಿಪ್ಪನ್ಪೇಟೆ ಕೆಲಕಾಲ ಹೊಗೆ ಆವರಿಸಿತು.
ಒಟ್ಟಾರೆಯಾಗಿ ಜ್ವರ ಬಾಧೆಯಿಂದಾಗಿ ಇಲ್ಲಿನ ಖಾಸಗಿ ಕ್ಲಿನಿಕ್ಗಳಲ್ಲಿ ರೋಗಿಗಳು ತುಂಬಿ ತುಳುಕುವಂತಾಗಿದ್ದು ಲ್ಯಾಬ್ಗಳಿಗೆ ಶುಕ್ರದೆಸೆ ಆರಂಭವಾಗಿ ರಕ್ತ ಮತ್ತು ಇನ್ನಿತರ ಟೆಸ್ಟ್ನ ಹೆಸರಿನಲ್ಲಿ ಹಗಲು ದರೋಡೆ ಮಾಡುತ್ತಿದ್ದು ಸರ್ಕಾರಿ ನಿಯಮಗಳಿಗೆ ಮೂರು ಕಾಸಿನ ಬೆಲೆ ಇಲ್ಲದಂತಾಗಿ ಹೇಳೋರೂ ಕೇಳೋರು ಇಲ್ಲದಂತಾಗಿ ಜನರು ಹಣವನ್ನು ಕೊಟ್ಟು ಜೀವ ಉಳಿಸಿಕೊಳ್ಳಲು ಶತ ಪ್ರಯತ್ನ ನಡೆಸಬೇಕಾದ ಅನಿರ್ವಾಯತೆ ಎದುರಾಗಿದೆ.