RIPPONPETE | ಧಾರ್ಮಿಕ ಪರ್ವದಿನಗಳು ನಿತ್ಯ ಆಚರಿಸಲ್ಪಡುತ್ತವೆ. ಶ್ರಾವಣ ಮಾಸದ ಶುಕ್ರವಾರಗಳಂದು ಅಭೀಷ್ಠವರ ಪ್ರದಾಯಿನಿ ಯಕ್ಷಿ ವಿಶ್ವವಂದ್ಯ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಭಕ್ತಸಮುದಾಯದವರು ಶ್ರದ್ಧಾ ಭಕ್ತಿಯಿಂದ ಸಂಕಷ್ಟಗಳಿಂದ ಮುಕ್ತರಾಗಿ ಉತ್ತಮ ಸಂಸ್ಕಾರ ಬೆಳೆಸುವಂತೆ ಪ್ರಾರ್ಥನೆ ಸಲ್ಲಿಸುತ್ತಾರೆ ಎಂದು ಹೊಂಬುಜ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರು ಶ್ರಾವಣ ಮಾಸದ ದ್ವಿತೀಯ ಶುಕ್ರವಾರದ ಆಶೀರ್ವಚನದಲ್ಲಿ ತಿಳಿಸಿದರು.
ಶ್ರೀ ವರಮಹಾಲಕ್ಷ್ಮಿ ದೇವಿ ಆರಾಧನೆಯನ್ನು ಆಧ್ಯಾತ್ಮಿಕ ಸಿರಿ ಸಮೃದ್ಧವಾಗಲು ಮತ್ತು ಧನಕನಕಾದಿ ಸಮೃದ್ಧವಾಗಿ ಸಂಕಷ್ಟ ಪರಿಹರಿಸಲು ವಿಶೇಷ ವ್ರತವನ್ನು ಕೈಗೊಳ್ಳುವರು. ಧನಕನಕಾದಿ ಸಂಪತ್ತಿಕ್ಕಿಂತಲೂ ಆಧ್ಯಾತ್ಮಿಕ ಸಂಪತ್ತು ವರ್ಧಿಯಾದಾಗ ಜೀವನ ಸಂತೃಪ್ತಿ ಪ್ರಾಪ್ತಿ ಆಗುತ್ತದೆ ಎಂದು ಪೂಜೆಯಲ್ಲಿ ಪಾಲ್ಗೊಂಡ ಭಕ್ತರನ್ನು ಹರಸಿ, ಆಶೀರ್ವದಿಸಿದರು.
ಶ್ರೀ ನೇಮಿನಾಥ ಸ್ವಾಮಿ, ಶ್ರೀ ಕೂಷ್ಮಾಂಡಿನಿ ದೇವಿ, ಶ್ರೀ ಸರಸ್ವತಿ ದೇವಿ, ಶ್ರೀ 1008 ಪಾರ್ಶ್ವನಾಥ ಸ್ವಾಮಿ ಹಾಗೂ ಜಗನ್ಮಾತೆ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಪರಂಪರಾನುಗತ ಆಗಮೋಕ್ತ ಶಾಸ್ತ್ರದನ್ವಯ ಪೂಜೆಗಳು ಸಾಂಗವಾಗಿ ನೆರವೇರಿದವು.
ನವಧಾನ್ಯಗಳು, ಹಣ್ಣು-ಹಂಪಲುಗಳು, ಸಿಹಿ ಖಾಧ್ಯಗಳು, 108 ಉಡಿ ದೇವರಿಗೆ ಸಮರ್ಪಿಸಲಾಯಿತು. ಪುಷ್ಪಾಲಂಕಾರದಿಂದ ಜಿನಮಂದಿರ, ಜಿನಬಿಂಬಗಳು ಶೋಭಾಯಾನಮಾನವಾಗಿ ಕಂಡುಕೊಂಡು ಭಕ್ತವೃಂದದವರು ಧನ್ಯರಾದರು.
ಯಥೋಚಿತ ಉಪಹಾರ, ಅನ್ನಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿತ್ತು. ಪರವೂರ ಭಕ್ತಾದಿಗಳಿಗೆ ವಸತಿ ಸೌಕರ್ಯ ಕಲ್ಪಿಸಲಾಗಿತ್ತು.