ರಿಪ್ಪನ್ಪೇಟೆ: ಗುರು-ವಿರಕ್ತವರ್ಗ ಬೇರೆಬೇರೆ ಎಂಬ ಭಾವನೆ ಸರಿಯಾದುದಲ್ಲ. ಗುರು-ವಿರಕ್ತ ಪರಂಪರೆ ಒಂದೇ ಆಗಿದ್ದು, ಸಮಾಜದ ಧಾರ್ಮಿಕ ಭಾವನೆಗೆ ಎರಡೂ ಕಣ್ಣುಗಳಿದ್ದಂತೆ ಎಂಬ ಹಿನ್ನೆಲೆಯಲ್ಲಿ ಧರ್ಮದ ಪ್ರಬೋಧನೆ ಮತ್ತು ಧರ್ಮ ಜಾಗೃತಿ ಸಾರುವ ನಿಟ್ಟಿನಲ್ಲಿ ಗುರು-ವಿರಕ್ತರು ಸಮಾಗಮಗೊಳ್ಳುತ್ತಿರುವುದಾಗಿ ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯ ಪಟ್ಟರು.
ಬೆಳಕೋಡು ಹಾಲಸ್ವಾಮಿಗೌಡರು ಮಂಗಳವಾರ ಆಯೋಜಿಸಲಾಗಿದ್ದ ಇಷ್ಟಲಿಂಗ ಮಹಾಪೂಜೆ ಮತ್ತು ಧರ್ಮ ಜಾಗೃತಿ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ವಿರಕ್ತ ಪರಂಪರೆಗೂ ಪಂಚಾಚಾರ್ಯ ಪರಂಪರೆಗೂ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಎಲ್ಲಾ ಸಮುದಾಯದವರು ಮತ್ತು ಮಲ್ಲವ ಸಮುದಾಯದವರು ಮಲ್ಲಿಕಾರ್ಜುನ ಸ್ವಾಮಿಯ ಭಕ್ತರೇ. ಶ್ರೀಶೈಲಕ್ಕೂ ಮಲೆನಾಡಿನ ಮಲ್ಲವರಿಗೂ ಅವಿನಾಭಾವ ಸಂಬಂಧವಿದೆ. ಅಲ್ಲಮಪ್ರಭುರವರ ಶ್ರೀಶೈಲದಲ್ಲಿ ಐಕ್ಯರಾಗಿದ್ದು ಈ ಎಲ್ಲಾಭಕ್ತರ ಅಪೇಕ್ಷೆಯು ಧರ್ಮದ ತಿಳುವಳಿಕೆ ಮತ್ತು ಧರ್ಮ ಜಾಗೃತಿಯೊಂದಿಗೆ ಭಕ್ತರ ಮನೆಯಲ್ಲಿ ಧರ್ಮ ಪ್ರಚಾರವನ್ನು ಮಾಡುವ ಮೂಲಕ ಶ್ರೀಶೈಲ ಶ್ರೀಗಳ ನಡಿಗೆ ಮಲೆನಾಡ ಭಕ್ತರ ಕಡೆಗೆ ಎಂಬ ಧ್ಯೇಯದೊಂದಿಗೆ ಒಂದು ವಾರಗಳ ಕಾಲ ಮಲೆನಾಡಿನ ವ್ಯಾಪ್ತಿಯ ಭಕ್ತರ ಮನೆಮನೆಗಳಿಗೆ ಭೇಟಿ ನೀಡಿ ಧರ್ಮ ಬೋಧನೆಯಲ್ಲಿ ತೊಡಗಿಕೊಂಡಿರುವುದಾಗಿ ತಿಳಿಸಿದರು.
ಆನಂದಪುರ ಮುರುಘರಾಜೇಂದ್ರ ಮಠದ ಜಗದ್ಗುರು ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮೀಜಿಯವರು ಸಾನಿಧ್ಯ ವಹಿಸಿ ಆಶೀರ್ಚಚನ ನೀಡಿ ವ್ಯಕ್ತಿ ಕ್ರಿಯಾಶೀಲವಾಗಿ ಸಾಮಾಜಿಕ ಮತ್ತು ಸಮಾಜದ ಸೇವೆಯಲ್ಲಿ ಸಕ್ರಿಯರಾಗಿ ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಳ್ಳುವುದರಿಂದ ಶ್ರೇಯಸ್ಸು ದೊರೆಯುವುದೆಂದು ಹೇಳಿದರು.
ಗುರು-ವಿರಕ್ತ ಪರಂಪರೆಯಲ್ಲಿ ಬೇಧ-ಭಾವವಿಲ್ಲ. ಕೆಲವು ಭಕ್ತರೇ ನಮ್ಮಗಳ ಮಧ್ಯೆ ಗೊಂದಲ ಸೃಷ್ಠಿಸುವ ಕೆಲಸ ಮಾಡಬಾರದು ಸಲಹೆ ನೀಡಿದರು.
ಸಮಾಜ ಸೇವ ಭಾಸ್ಕರ ಪ್ರಶಸ್ತಿ :
ಶ್ರೀಶೈಲ ಪೀಠದಲ್ಲಿ ನಡೆಯುವ ವಾರ್ಷಿಕೋತ್ಸವ ಸಮಾರಂಭದಲ್ಲಿ ಬೆಳಕೋಡು ಹಾಲಸ್ವಾಮಿಗೌಡರಿಗೆ ಸಮಾಜ ಸೇವ ಭಾಸ್ಕರ ಪ್ರಶಸ್ತಿ ನೀಡಲಾಗುವುದೆಂದು ಶ್ರೀಶೈಲ ಜಗದ್ಗುರುಗಳು ಈ ಸಂದರ್ಭದಲ್ಲಿ ಪ್ರಕಟಿಸಿದರು.
ಈ ಸಂದರ್ಭದಲ್ಲಿ ಕೋಣಂದೂರು ಬೃಹನ್ಮಠದ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಮೂಲೆಗದ್ದೆ ಸದಾನಂದ ಶಿವಾಶ್ರಮದ ಅಭಿನವ ಚನ್ನಬಸವ ಸ್ವಾಮೀಜಿ, ಬಿಜಾಪುರ ಜಿಲ್ಲೆ ಬಾಗೇವಾಡಿ ಮಠದ ರೇಣುಕಾ ಶಿವಾಚಾರ್ಯ ಸ್ವಾಮೀಗಳು, ಮಾಜಿ ಸಚಿವ ಆರಗ ಜ್ಞಾನೇಂದ್ರ, ಮುಖಂಡ ಟಿ.ಡಿ. ಮೇಘರಾಜ್, ಉದ್ಯಮಿ ಕೆ.ಆರ್. ಪ್ರಕಾಶ್ ಕೋಣಂದೂರು, ಬೆಳಕೋಡು ಹಾಲಸ್ವಾಮಿಗೌಡ, ವೀರೇಶ, ಉಮೇಶ, ಗಿರೀಶ ಇನ್ನಿತರರಿದ್ದರು.