RIPPONPETE | ಮಲೆನಾಡಿನ ವ್ಯಾಪ್ತಿಯ ಬಾಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕುಕ್ಕಳಲೇ ಗ್ರಾಮದ ಕಂದಾಯ ಸರ್ವೇ ನಂಬರ್ 13 ಮತ್ತು 14ರಲ್ಲಿ ಅಕ್ರಮ ಒತ್ತವರಿ ನೆಪದಲ್ಲಿ ನೂರಾರು ಎಕರೆ ಜಮೀನಿನಲ್ಲಿನ ಲಕ್ಷಾಂತರ ರೂ. ಬೆಲೆ ಬಾಳುವ ಮರಗಳ ಮಾರಣ ಹೋಮ ನಡೆಯುತ್ತಿದ್ದರೂ ಕೂಡಾ ಅರಣ್ಯ ಇಲಾಖೆಯವರಾಗಲಿ ಕಂದಾಯ ಇಲಾಖೆಯವರಾಗಲಿ ಗಮನಹರಿಸದೇ ನಿರ್ಲಕ್ಷ್ಯ ವಹಿಸಿದ್ದಾರೆಂದು ಪರಿಸರಾಸಕ್ತರು ಆರೋಪಿಸಿದ್ದಾರೆ.
ಕುಕ್ಕಳಲೇ ಗ್ರಾಮದ ಸರ್ವೇ ನಂ 13 ರಲ್ಲಿ ನೂರಾರು ಎಕರೆ ಜಮೀನು ಇದ್ದು ಆ ಜಾಗದಲ್ಲಿ ಕೆಲ ಕಾಲ ಬೇಲಿ ಹಾಕಿ ಒತ್ತುವರಿ ಮಾಡಿಕೊಳ್ಳುವುದು ನಂತರ ಕೋಟ್ಯಂತರ ರೂಪಾಯಿಗಳಿಗೆ ಸರ್ಕಾರಿ ಜಮೀನು ಮಾರಾಟ ಮಾಡುತ್ತಿದ್ದರೂ ಕೂಡಾ ಕಂದಾಯ ಇಲಾಖೆಯ ಅಧಿಕಾರಿಗಳು ಗೊತ್ತಿದ್ದರೂ ಕೂಡಾ ಕ್ರಮ ಕೈಗೊಳ್ಳದೇ ಇರುವುದರ ಹಿಂದೆ ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿದೆ. ನಿತ್ಯ ಇಲ್ಲಿನ ಖಾಲಿ ಜಾಗದಲ್ಲಿ ಬೆಲೆ ಬಾಳುವಂತಹ ಬೃಹತ್ ಗಾತ್ರದ ಹಲವಾರು ವರ್ಷಗಳ ಹಳೆಯ ಮರಗಳನ್ನು ಜೆಸಿಬಿ ಯಂತ್ರದ ಮೂಲಕ ರಾತ್ರೋರಾತ್ರಿ ಕಡಿತಲೆ ಮಾಡಿ ಭೂಮಿಯಲ್ಲಿ ಹೊಂಡ ಗುಂಡಿ ತೊಡಿ ಮುಚ್ಚುವುದು ನಂತರ ಬಾಂಡ್ ಪೇಪರ್ ಮೂಲಕ ಸರ್ಕಾರಿ ಜಾಗವನ್ನು ಹಣದಾಸೆಗೆ ಲಕ್ಷಾಂತರ ರೂಪಾಯಿಗಳಿಗೆ ಕದ್ದುಮುಚ್ಚಿ ಮಾರಾಟ ಮಾಡಲಾಗುತ್ತಿದ್ದು ಕಂದಾಯ ಇಲಾಖೆಯವರಾಗಲಿ ಅರಣ್ಯ ಇಲಾಖೆಯವರಾಗಲಿ ನಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂಬಂತೆ ಕಣ್ಣಿದ್ದು ಕುರುಡರತ್ತಾಗಿದ್ದಾರೆಂದು ಸಾರ್ವಜನಿಕರು ತಮ್ಮ ಆಕ್ರೋಶ ವ್ಯಕ್ತಪಡಿಸಿ ನಿಜವಾದ ರೈತ ತನ್ನ ಜಮೀನಿಗೆ ಸೊಪ್ಪು ಉರುವಲಿಗಾಗಿ ಕಟ್ಟಿಗೆ ಕಡಿಯಲು ಹೋದರೆ ಅರಣ್ಯ ಇಲಾಖೆಯವರು ಕೇಸ್ ದಾಖಲಿಸುತ್ತಾರೆ. ಆದರೆ ಲಕ್ಷಾಂತರ ರೂ. ಮೌಲ್ಯದ ಮರಗಳು ಕಣ್ಮರೆಯಾಗುತ್ತಿದ್ದರೂ ಕೂಡಾ ಅವರ ಮೇಲೆ ಯಾವುದೇ ಕ್ರಮ ಕೈಗೊಳ್ಳದೇ ಇರುವುದರ ಹಿಂದೆ ಅಧಿಕಾರಿಗಳ ಕಿಸೆ ಭರ್ತಿಯಾದಂತೆ ಕಾಣುತ್ತಿದೆ ಎಂದು ರೈತರ ಆರೋಪವಾಗಿದೆ.
ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿದ ಕಂದಾಯ ಅಧಿಕಾರಿಗಳು !
ಕುಕ್ಕಳಲೇ ಗ್ರಾಮದ ಸರ್ವೇ ನಂ 13 ರಲ್ಲಿ ನೂರಾರು ಎಕರೆ ಸರ್ಕಾರಿ ಜಮೀನು ಖಾಸಗಿಯವರ ಪಾಲಾಗುತ್ತಿದ್ದರೂ ಕೂಡಾ ಹೊಸನಗರ ತಹಶೀಲ್ದಾರ್ ನೇತೃತ್ವದ ತಂಡ ಸ್ಮಶಾನ ಜಾಗವನ್ನು ಪರಿಶಿಷ್ಟ ಜನಾಂಗದವರು ಒತ್ತುವರಿ ಮಾಡಿದ್ದಾರೆಂದು ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದು ಈ ಸಂದರ್ಭದಲ್ಲಿ ಹಲವರು ಅಧಿಕಾರಿಗಳ ಎದುರು ಪ್ರಶ್ನಿಸಲಾಗದೇ ಹಿಂದೆ ಬಡವರ ಹೊಟ್ಟೆಯ ಮೇಲೆ ಹೊಡೆಯಲು ಬಂದಿದ್ದಾರೆ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸುತ್ತಿರುವ ಅಧಿಕಾರಿಗಳ ಈ ದುಂಡಾ ವರ್ತನೆಯ ಬಗ್ಗೆ ಈ ರೀತಿಯಲ್ಲಿ ವ್ಯಾಖ್ಯಾನಿಸುತ್ತಿದ್ದು ಕಂಡಬಂತು.
ಒತ್ತುವರಿ ಹೆಸರಿನಲ್ಲಿ ಸರ್ಕಾರಿ ಜಾಗ ಖಾಸಗಿಯವರ ಪಾಲಾಗುತ್ತಿರುವ ಬಗ್ಗೆ ಈ ಹಿಂದೆ ಬೆಳ್ಳೂರು ಗ್ರಾಮ ಪಂಚಾಯತಿ ಆವರಣದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರೊಬ್ಬರು ಜಿಲ್ಲಾಧಿಕಾರಿಗಳಿಗೆ ಕುಕ್ಕಳಲೇ ಗ್ರಾಮದ ಸರ್ವೇ ನಂ 13 ಮತ್ತು ಅರಣ್ಯ ಸರ್ವೇ ನಂ 14 ರಲ್ಲಿ ಅಕ್ರಮ ಸಾಗುವಳಿ ಹೆಸರಿನಲ್ಲಿ ಲಕ್ಷಾಂತರ ರೂ. ಮೌಲ್ಯದ ಮರಗಳ ಮಾರಣಹೋಮ ಮತ್ತು ಸರ್ಕಾರಿ ಕಂದಾಯ ಜಮೀನು ಒತ್ತುವರಿ ಮಾಡುವ ಮೂಲಕ ಖಾಸಗಿಯವರಿಗೆ ಮಾರಾಟ ಮಾಡಲಾಗುತ್ತಿದೆ ಎಂಬ ಬಗ್ಗೆ ದೂರು ಸಲ್ಲಿಸುವ ಮೂಲಕ ರಾಜ್ಯಪಾಲರಿಗೂ ದೂರಯನ್ನು ನೀಡಲಾಗಿದ್ದರೂ ಸ್ಥಳೀಯ ಅಧಿಕಾರಿಗಳು ಮಾತ್ರ ಯಾವುದನ್ನು ಲೆಕ್ಕಿಸದೇ ನಿರ್ಲಕ್ಷ್ಯ ವಹಿಸಿ ತಮ್ಮ ಜೇಬು ತುಂಬಿಕೊಳ್ಳುವಲ್ಲಿ ಮುಂದಾಗಿದ್ದಾರೆಂಬುದಕ್ಕೆ ಸಾಕ್ಷಿಯಾಗಿದೆ.
ಒಟ್ಟಾರೆಯಾಗಿ ಶಿವಮೊಗ್ಗ ಜಿಲ್ಲಾ ದಕ್ಷ ಜಿಲ್ಲಾಧಿಕಾರಿಗಳು ಮತ್ತು ಸಾಗರ ಉಪವಿಭಾಗಾಧಿಕಾರಿಗಳು ಸಾಗರ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಗಮನಹರಿಸಿ ಖಾಸಗಿಯವರ ಪಾಲಾಗುತ್ತಿರುವ ಕಂದಾಯ ಭೂಮಿ ಮತ್ತು ಅಪಾರ ಪ್ರಮಾಣದ ಮರಗಳ ಮಾರಣ ಹೋಮವನ್ನು ತಡೆಯುವಲ್ಲಿ ಮುಂದಾಗುವರೆ ಕಾದು ನೋಡಬಾಕಾಗಿದೆ
ಎಂದು ಸೋಮಶೇಖರ, ಚಂದ್ರು, ಸಿದ್ದಪ್ಪ, ಕುಮಾರ, ಲಕ್ಷ್ಮಣಪ್ಪ, ದುರ್ಗಪ್ಪ, ಹೇಳಿದ್ದಾರೆ.