N.R.PURA | ಮನುಷ್ಯ ಜೀವನದಲ್ಲಿ ಕ್ರಿಯಾಶೀಲನಾಗಿ ಬಾಳಬೇಕು. ಜೀವನದ ಶ್ರೇಯಸ್ಸಿಗೆ ಆದರ್ಶಗಳು ಮೂಲ. ಶಿಕ್ಷಣ ಅರೋಗ್ಯ ಮತ್ತು ಅಭಿವೃದ್ಧಿ ವಿಚಾರಗಳಲ್ಲಿ ರಾಜಕೀಯ ಪ್ರವೇಶ ಒಳ್ಳೆಯದಲ್ಲವೆಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಶುಕ್ರವಾರ ಶ್ರೀ ರಂಭಾಪುರಿ ಪೀಠದಲ್ಲಿ ಶ್ರಾವಣ ಇಷ್ಟಲಿಂಗ ಮಹಾಪೂಜಾ ಹಾಗೂ ಶ್ರೀ ಸೋಮೇಶ್ವರ ಕೆರೆಗೆ ಬಾಗಿನ ಅರ್ಪಿಸಿ ನಂತರ ನಡೆದ ಧರ್ಮ ಸಮಾರಂಭದಲ್ಲಿ ಆಶೀರ್ವಚನ ನೀಡುತ್ತಿದ್ದರು.
ಎಲ್ಲರ ಒಳಿತಿಗಾಗಿ ಪ್ರಯತ್ನಿಸುವ ನಿಜ ಧರ್ಮಕ್ಕಿಂತ ದೊಡ್ಡ ಧರ್ಮ ಯಾವುದೂ ಇಲ್ಲ. ಭೂಮಿಗಿರುವ ಸಹನಶೀಲತೆ, ಸೂರ್ಯನಿಗಿರುವ ಸಮಯ ಪ್ರಜ್ಞೆ, ಚಂದ್ರನಿಗಿರುವ ಶಾಂತ ಚಿತ್ತ, ಹೂವಿಗಿರುವ ನಗು ಮನುಷ್ಯನಲ್ಲಿ ಬೆಳೆದು ಬಂದರೆ ಬಾಳು ಬಂಗಾರಗೊಳ್ಳುವುದರಲ್ಲಿ ಯಾವುದೇ ಸಂದೇಹವಿಲ್ಲ. ಜೀವನದಲ್ಲಿ ನೀನು ಗೆದ್ದರೆ ನೀನು ಯಾರೆಂದು ಎಲ್ಲರಿಗೂ ಗೊತ್ತಾಗುತ್ತದೆ. ಒಂದು ವೇಳೆ ಸೋತರೆ ನಿಮ್ಮವರು ಯಾರೆಂದು ನಿನಗೆ ತಿಳಿಯುತ್ತದೆ. ಜೀವನದಲ್ಲಿ ಸೋಲು ಗೆಲುವು ಎರಡೂ ಮುಖ್ಯ. ರಕ್ತವಿಲ್ಲದ ದೇಹವು ಹೇಗೆ ಬದುಕಲು ಸಾಧ್ಯವಿಲ್ಲವೋ ಹಾಗೆಯೇ ಗುರು ಕಾರುಣ್ಯ, ಶ್ರದ್ಧೆ ಮತ್ತು ಪ್ರಾರ್ಥನೆಗಳಿಲ್ಲದ ಆತ್ಮವು ಬದುಕಲು ಸಾಧ್ಯವಿಲ್ಲ. ಹರಸುವ ಹಿರಿಯರು, ಹಾರೈಸುವ ಆತ್ಮೀಯರು ಪ್ರೀತಿಸುವ ಸ್ನೇಹಿತರು ಇದ್ದರೆ ಸಾಕು. ಅರಸನಾಗುವ ಅಗತ್ಯವೇ ಇಲ್ಲ. ಧಾರ್ಮಿಕ ವಿಧಿ ವಿಧಾನಗಳು ಮಾನವನ ಶ್ರೇಯಸ್ಸಿಗೆ ಸ್ಫೂರ್ತಿಯನ್ನು ಉಂಟು ಮಾಡುತ್ತವೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ನಿಜ ಜೀವನದ ಅರಿವನ್ನು ಬೋಧಿಸಿದ ವಿಚಾರಗಳನ್ನು ಮರೆಯಬಾರದೆಂದರು.
ಹುಡುಗಿ ಹಿರೇಮಠದ ವಿರೂಪಾಕ್ಷಲಿಂಗ ಶ್ರೀಗಳು, ಸಿದ್ಧರಬೆಟ್ಟದ ವೀರಭದ್ರ ಶ್ರೀಗಳು, ಗುರುಕುಲ ಕುಲಪತಿ ಹಿರೇಮಠದ ಸಿದ್ಧಲಿಂಗಯ್ಯ, ಶಿವಾನಂದ ಗುಂಡೇನಹಳ್ಳಿ, ಯೋಗೀಶ, ಶಿವಕುಮಾರ ಮೊದಲಾದವರು ಬಾಗಿನ ಅರ್ಪಿಸುವ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕೇಂದ್ರ ಸಚಿವ ಸೋಮಣ್ಣ ಭೇಟಿ:
ಕೇಂದ್ರದ ರೇಲ್ವೆ ಮತ್ತು ಜಲಶಕ್ತಿ ಸಚಿವರಾದ ವಿ.ಸೋಮಣ್ಣ ಶುಕ್ರವಾರ ಸಂಜೆ ಶ್ರೀ ಜಗದ್ಗುರು ರಂಭಾಪುರಿ ಪೀಠಕ್ಕೆ ಆಗಮಿಸಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರ ಸ್ವಾಮಿಗೆ ಪೂಜೆ ಸಲ್ಲಿಸಿದರು. ನಂತರ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳಿಂದ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳು ಮಲೆನಾಡಿನ ಸಮಸ್ಯಗಳ ಕುರಿತು ಹಾಗೂ ಭದ್ರಾ ನದಿಯಿಂದ ಶ್ರೀ ರಂಭಾಪುರಿ ಪೀಠಕ್ಕೆ ಶಾಶ್ವತ ಕುಡಿಯುವ ನೀರು ಯೋಜನೆ ಜಾರಿಗೊಳಿಸುವ ಕುರಿತು ಸಚಿವರ ಗಮನಕ್ಕೆ ತಂದರು. ಅಲ್ಲದೇ ಚಿಕ್ಕಮಗಳೂರಿನಿಂದ ಶೃಂಗೇರಿಗೆ ರೇಲ್ವೆ ಮಾರ್ಗ ಕಲ್ಪಿಸುವ ಯೋಜನೆ ಮಾಡುವ ಸಂದರ್ಭದಲ್ಲಿ ಬಾಳೆಹೊನ್ನೂರನ್ನೂ ಪರಿಗಣಿಸುವಂತೆ ಜಗದ್ಗುರುಗಳು ಸಲಹೆ ನೀಡಿದರು. ಶಾಸಕ ಟಿ.ಡಿ.ರಾಜೇಗೌಡರು, ಸಿದ್ಧರಬೆಟ್ಟದ ವೀರಭದ್ರ ಶ್ರೀಗಳು ಇದ್ದರು.