HOSANAGARA | ಇಲ್ಲಿನ ಪಟ್ಟಣ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಆಗಸ್ಟ್ 29ರ ಗುರುವಾರದಂದು ನಡೆಯಲಿದೆ.
ಹೈಡ್ರಾಮ ಆರಂಭ :
ಸ್ಥಳೀಯ ಸಂಸ್ಥೆಗಳಿಗೆ ಸರ್ಕಾರ ಇತ್ತೀಚಿಗಷ್ಟೇ ಮೀಸಲಾತಿ ಪ್ರಕಟಿಸಿತ್ತು. ಇದರಿಂದ ಖಾಲಿ ಇದ್ದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿದೆ. ಇಲ್ಲಿನ ಪಟ್ಟಣ ಪಂಚಾಯತಿಯಲ್ಲಿ 11 ಸದಸ್ಯರ ಬಲವಿದ್ದು ಅದರಲ್ಲಿ ಬಿಜೆಪಿಯ ಗುರುರಾಜ್ ಆರ್, ಸುರೇಂದ್ರ, ಗಾಯಿತ್ರಿ ನಾಗರಾಜ್, ಗುಲಾಬಿ ಮರಿಯಪ್ಪ, ಕಾಂಗ್ರೆಸ್ ಪಕ್ಷದ ಸದಸ್ಯರ ಬಲ ಅಶ್ವಿನಿಕುಮಾರ್, ಚಂದ್ರಕಲಾ ನಾಗರಾಜ್, ಸಿಂಥೀಯ, ಶಾಹಿನಾ ಜೆಡಿಎಸ್ ಪಕ್ಷದಿಂದ ಹಾಲಗದ್ದೆ ಉಮೇಶ್, ನಾಗಪ್ಪ ಹಾಗೂ ಕೃಷ್ಣವೇಣಿ ಒಟ್ಟು ಬಿಜೆಪಿ ಸದಸ್ಯರ ಸಂಖ್ಯೆ 4, ಕಾಂಗ್ರೆಸ್ ಸದಸ್ಯರ ಸಂಖ್ಯೆ 4 ಹಾಗೂ ಜೆಡಿಎಸ್ ಸದಸ್ಯರ ಸಂಖ್ಯೆ 3 ಇದ್ದು ಈ ಬಾರಿ ಅಧ್ಯಕ್ಷರ ಆಯ್ಕೆ ಎಸ್.ಸಿ ಹಾಗೂ ಉಪಾಧ್ಯಕ್ಷ ಸಾಮಾನ್ಯ ಮಹಿಳೆಯಾಗಿದ್ದು ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆಯಿಂದ ನಾಗಪ್ಪ ಹಾಗೂ ಗುಲಾಬಿ ಮರಿಯಪ್ಪನವರ ಮಧ್ಯೆ ಅಧ್ಯಕ್ಷ ಸ್ಥಾನಕ್ಕೆ ಫೈಟ್ ನಡೆಯುತ್ತಿದೆ ಎಂದು ಎಲ್ಲರೂ ತಿಳಿದುಕೊಂಡಿದ್ದು ಬಿಜೆಪಿ ಮುಖಂಡರು ಮಧ್ಯೆ ಪ್ರವೇಶಿಸಿ ಇಬ್ಬರಲ್ಲಿ ಒಬ್ಬರು ಬಿಜೆಪಿಯಿಂದ ಆಯ್ಕೆಯಾಗುವ ಸಾಧ್ಯತೆ ಕಂಡುಬಂದಿತ್ತು.
ಬದಲಾದ ಪರಿಸ್ಥಿತಿ :
ಬಿಜೆಪಿ ಜೆಡಿಎಸ್ ಪಕ್ಷಗಳ ಮೈತ್ರಿ ಇರುವ ಕಾರಣಕ್ಕೆ ಮೀಸಲಾತಿ ಪ್ರಕಟವಾಗುತ್ತಿದ್ದಂತೆ, ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ ಬಳಿ ಎಸ್ ಸಿ ಮೀಸಲಾತಿ ಅಭ್ಯರ್ಥಿಯೇ ಇಲ್ಲ, ಅನಾಯಾಸವಾಗಿ ಬಿಜೆಪಿ, ಜೆಡಿಎಸ್ ತೆಕ್ಕೆಗೆ ಆಡಳಿತ ಸೇರಲಿದೆ ಎನ್ನಲಾಗಿತ್ತು. ಬಿಜೆಪಿಯ 4 ಮತ್ತು ಜೆಡಿಎಸ್ 3 ಸದಸ್ಯರ ಹೊಂದಾಣಿಕೆಯ 7 ಸ್ಥಾನಗಳಿದ್ದು ಎಸ್.ಸಿ ಮೀಸಲು ಅಭ್ಯರ್ಥಿ ನಾಗಪ್ಪನವರು ಅಧ್ಯಕ್ಷರಾಗಿ ಆಯ್ಕೆಯಾಗಲಿದ್ದಾರೆ ಎನ್ನುವ ಚರ್ಚೆ ನಡೆದಿತ್ತು. ಆದರೆ ಆ ಬಳಿಕ ನಡೆದ ರಾಜಕೀಯ ಬೆಳವಣಿಗೆ ಪರಿಸ್ಥಿತಿಯನ್ನೇ ಬದಲಾಯಿಸಿದೆ. ಬಿಜೆಪಿಯ ಇಬ್ಬರು ಅಧ್ಯಕ್ಷ ಆಕಾಂಕ್ಷಿಗಳು ಸೇರಿದಂತೆ ಮೈತ್ರಿಕೂಟದ ಮೂವರು ಅಭ್ಯರ್ಥಿಗಳು ಸಂಪರ್ಕಕ್ಕೆ ಸಿಗುತ್ತಿಲ್ಲ ಎನ್ನಲಾಗಿದೆ. ಶಾಸಕ ಬೇಳೂರು ಗೋಪಾಲಕೃಷ್ಣ ಶತಾಯ-ಗತಾಯ ಪಟ್ಟಣ ಪಂಚಾಯತಿ ಕಾಂಗ್ರೆಸ್ ಪಕ್ಷದ ಮಡಿಲಿಗೆ ತರಬೇಕೆಂಬ ಹಠದಿಂದ ಅಧ್ಯಕ್ಷ ಆಕಾಂಕ್ಷಿಯನ್ನು ಬಿಜೆಪಿಯಿಂದ ಇಬ್ಬರು ಹಾಗೂ ಓರ್ವ ಜೆಡಿಎಸ್ ಸದಸ್ಯರಿಗೆ ಗಾಳ ಹಾಕಿ ಹಿಡಿದಿಟ್ಟುಕೊಂಡಿದ್ದಾರೆ ಎಂದು ಹೇಳಲಾಗಿದೆ. ಬಿಜೆಪಿಯಲ್ಲಿ ಅಧ್ಯಕ್ಷರಾಗಬೇಕಾಗಿದ್ದು ಎಸ್.ಸಿ ಸದಸ್ಯರು ಇಲ್ಲದೇ ಪಟ್ಟಣ ಪಂಚಾಯತಿ ಚುನಾವಣೆಯಿಂದ ಹಿಂದೆ ಸರಿದರೂ ಆಶ್ಚರ್ಯ ಪಡಬೇಕಾಗಿಲ್ಲ. ರಾಜಕೀಯ ಚದುರಂಗದ ಆಟ ಹೇಗಾಗುತ್ತದೋ ಆ.29ರ ವರೆಗೆ ಕಾದುನೋಡಬೇಕಿದೆ.