HOSANAGARA | ಕೃಷ್ಣನ ಬದುಕು ಮತ್ತು ಸಂದೇಶ ಜಗತ್ತಿನಾದ್ಯಂತ ಪಸರಿಸಲಿ ಎಂದು ಸಾಮಾಜಿಕ ಕಾರ್ಯಕರ್ತ ನಾಗರಾಜ್ ಅರೆಹದ ತಿಳಿಸಿದರು.
ಕಾರಣಗಿರಿ ಗ್ರಾಮಭಾರತಿ ಟ್ರಸ್ಟ್, ರಾಷ್ಟ್ರೋತ್ಥಾನ ಬಳಗದ ಆಶ್ರಯದಲ್ಲಿ ಕೃಷ್ಣಾಷ್ಟಮಿ ಅಂಗವಾಗಿ ನಡೆದ ಶ್ರೀ ಕೃಷ್ಣಲೋಕ-2024 ಕಾರ್ಯಕ್ರಮದಲ್ಲಿ 35ನೇ ವರ್ಷದ ಕೃಷ್ಣವೇಷ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಕೃಷ್ಣವೇಷ ಧರಿಸುವುದರಿಂದ ಮಕ್ಕಳಲ್ಲಿ ಕೃಷ್ಣನ ಕುರಿತು ಆಸಕ್ತಿ ಬೆಳೆಯುತ್ತದೆ. ಕೃಷ್ಣನ ಜೀವನದ ಪರಿಚಯ ಮಾಡಿಕೊಟ್ಟು ಆತನ ಸಂದೇಶವನ್ನು ತಿಳಿಹೇಳಬೇಕೆಂದರು.
ಗ್ರಾಮಭಾರತಿ ಟ್ರಸ್ಟ್ ಅಧ್ಯಕ್ಷ ಹನಿಯ ರವಿ ಮಾತನಾಡಿ, ಕೃಷ್ಣ ಎಲ್ಲ ವಯಸ್ಸಿನವರಿಗೂ ಇಷ್ಟ. ಆತನ ಸರಳ ಜೀವನ ಮತ್ತು ಉದಾತ್ತ ಚಿಂತನೆ ತಿಳಿಸಿಕೊಡಬೇಕು. ಕೃಷ್ಣನ ಹೆಸರಿನಲ್ಲಿ ಜಗತ್ತು ಒಂದಾಗುವ ದಿನ ಬರಲಿದೆ ಎಂದರು.
ಗ್ರಾಮಭಾರತಿ ಟ್ರಸ್ಟ್ ನ ಗೌರವಾಧ್ಯಕ್ಷ ಎನ್. ಡಿ. ನಾಗೇಂದ್ರರಾವ್, ಪುರೋಹಿತ ವಾಸುದೇವ ಉಡುಪ ವೇದಿಕೆಯಲ್ಲಿದ್ದರು.
ಬೆಳಗ್ಗೆಯಿಂದ ನಡೆದ ಶ್ರೀಕೃಷ್ಣಲೋಕ-24 ಕಾರ್ಯಕ್ರಮದಲ್ಲಿ ವೇ. ಶೇಷಗಿರಿ ಭಟ್ಟರ ನೇತೃತ್ವದಲ್ಲಿ ಭಗವದ್ಗೀತೆಯ ಹದಿನೆಂಟೂ ಅಧ್ಯಾಯಗಳ ಪಾರಾಯಣ, ವಿಷ್ಣುಸಹಸ್ರನಾಮ ಪಠಣ, ಕೃಷ್ಣನಿಗೆ ಸಂಬಂಧಿಸಿದ ಭಜನೆ, ಮಕ್ಕಳಿಂದ ಕೃಷ್ಣವೇಷ, ಶೋಭಾಯಾತ್ರೆ ಹಾಗೂ ಕಲಾಭಾರತಿ ನೃತ್ಯಶಾಲೆ ಕಾರಣಗಿರಿ ಹಾಗೂ ಸುವರ್ಧಿನಿ ನೃತ್ಯಶಾಲೆ ಮಾರುತಿಪುರದ ಮಕ್ಕಳಿಂದ ಕೃಷ್ಣನ ಲೀಲೆಗಳ ನೃತ್ಯ ಪ್ರದರ್ಶನ ನಡೆಯಿತು.
ವಿನಾಯಕ ಪ್ರಭು ನಿರೂಪಿಸಿ, ಗುರುಮೂರ್ತಿ ವಂದಿಸಿದರು.