RIPPONPETE | ಮಲೆನಾಡಿನಲ್ಲಿ ಈ ಬಾರಿ ಸಮೃದ್ಧವಾಗಿ ಮಳೆಯಾಗಿರುವ ಹಿನ್ನೆಲೆಯಲ್ಲಿ ಹಳ್ಳ-ಕೊಳ್ಳಗಳು ಸೇರಿದಂತೆ ನದಿಗಳು ತುಂಬಿ ಹರಿಯುತ್ತಿವ ಹಿನ್ನೆಲೆಯಲ್ಲಿ ರಿಪ್ಪನ್ಪೇಟೆಯ ಕಾಲಭೈರವೇಶ್ವರ ಒಕ್ಕಲಿಗ ಮಹಿಳಾ ಸಂಘದ ಸದಸ್ಯರು ಗವಟೂರು ಹೊಳೆಗೆ ಇಂದು ಬಾಗಿನ ಅರ್ಪಿಸಿದರು.
ನಂತರ ಸಂಘದ ಅಧ್ಯಕ್ಷೆ ಸುಮಂಗಲ ಹರೀಶ್, ಮಾಧ್ಯಮದವರೊಂದಿಗೆ ಮಾತನಾಡಿ, ಕಳೆದ ಎರಡು ವರ್ಷದಿಂದ ಮಲೆನಾಡಿನಲ್ಲಿ ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ಬರಗಾಲದ ಛಾಯೆಯಿಂದ ಮಲೆನಾಡಿನ ಜನತೆ ಹಾಗೂ ಜನ ಜಾನುವಾರುಗಳು ಮತ್ತು ಕಾಡು ಪ್ರಾಣಿಗಳು ಕುಡಿಯುವ ನೀರಿನ ಸಂಕಷ್ಟವನ್ನು ಎದುರಿಸಬೇಕಾಯಿತು. ಆದರೆ ಈ ಬಾರಿ ಮಲೆನಾಡಿನಲ್ಲಿ ಸಮೃದ್ಧವಾಗಿ ಮಳೆ ಸುರಿದು ಹಳ್ಳ-ಕೊಳ್ಳಗಳು, ಹೊಳೆ, ನದಿ, ತೊರೆಗಳಲ್ಲಿ ಮಳೆ ನೀರು ತುಂಬಿ ಮೈದುಂಬಿ ಹರಿಯುತ್ತಿದೆ. ಈ ಶುಭ ಸಂದರ್ಭದಲ್ಲಿ ರಿಪ್ಪನ್ಪೇಟೆ ಕಾಲಭೈರೇಶ್ವರ ಒಕ್ಕಲಿಗ ಮಹಿಳಾ ಸಂಘದ ವತಿಯಿಂದ ಗವಟೂರು ಹೊಳೆಗೆ ಬಾಗಿನ ಅರ್ಪಿಸಲು ಸಂತಸವಾಯಿತು ಎಂದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ರೂಪ ಶಂಕ್ರಪ್ಪ, ನಿರ್ದೇಶಕರುಗಳಾದ ಪ್ರಮೀಳಾ ಲಕ್ಷ್ಮಣಗೌಡ, ವಾಣಿ ಗೋವಿಂದಪ್ಪ, ಕೋಮಲ ಕೇಶವ್, ಪ್ರವೀಣ ಮಂಜುನಾಥ್, ಜಯಂತಿ ಅಶೋಕ್, ಶ್ಯಾಮಲಾ ಪ್ರದೀಪ್, ವೀಣಾ ಗುರುಮೂರ್ತಿ, ಮಮತಾ ವಿಷ್ಣುಮೂರ್ತಿ ಇದ್ದರು.