HOSANAGARA | ಸಾರ್ವಜನಿಕರ ಅಹವಾಲುಗಳಿಗೆ ತಾಲೂಕಿನ ಸೊನಲೆ ಗ್ರಾಮ ಪಂಚಾಯ್ತಿ ಪಿಡಿಒ ಕಾವೇರಿ ಅವರು ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಪಂಚಾಯತಿಯ ಸದಸ್ಯರ ಸಾಮಾನ್ಯ ಸಭೆಯ ನಿರ್ಣಯ ಹಾಗೂ ಗ್ರಾಮಸಭೆಯ ಸಾರ್ವಜನಿಕರ ನಿರ್ಣಯದ ವಿರುದ್ದ ಅವರ ವರ್ತನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ್ದ ಗ್ರಾಮಸ್ಥರು ಪಿಡಿಒ ಕಾವೇರಿ ಅವರನ್ನು ಕೂಡಲೇ ವರ್ಗಾಯಿಸಬೇಕೆಂದು ಆಗ್ರಹಿಸಿ ನೋಡಲ್ ಅಧಿಕಾರಿ ಸಚಿನ್ ಹೆಗಡೆ ಅವರಿಗೆ ಮನವಿ ಸಲ್ಲಿಸಿದರು.
ಪಿಡಿಒ ಕಾವೇರಿ ಈ ಗ್ರಾಮ ಪಂಚಾಯ್ತಿ ಕಚೇರಿಯಲ್ಲಿ ಕಳೆದ ಎರಡೂವರೆ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಕ್ಷೇತ್ರದ ಅಭಿವೃದ್ದಿಗೆ ಪೂರಕವಾಗಿ ಸ್ಪಂದಿಸುತ್ತಿಲ್ಲ. ಇದರಿಂದ ಯಾವುದೇ ಜನಪರ ಕಾರ್ಯಕ್ರಮ ಆಯೋಜನೆಗೆ ಹಿನ್ನಡೆಯಾಗಿದೆ. ಕರ ವಸೂಲಿ ಸೇರಿದಂತೆ ಆದಾಯ ಹೆಚ್ಚಿಸುವ ಕಾರ್ಯದ ಕಡೆ ಗಮನ ಹರಿಸುತ್ತಿಲ್ಲ. ಈ ಹಿನ್ನಲೆಯಲ್ಲಿ ಅವರನ್ನು ಕೂಡಲೇ ಬೇರೆಡೆಗೆ ವರ್ಗಾಹಿಸುವಂತೆ ಮನವಿ ಮಾಡಿದರು.
ಈ ವೇಳೆ ಗ್ರಾಮಸ್ಥರಾದ ಡಿ. ರಾಮಚಂದ್ರ, ಪ್ರಭಾಕರಶೆಟ್ಟಿ, ವಿಶ್ವನಾಥ, ಗಿರೀಶ್, ಸಂದೀಪ್, ಸುಬ್ರಹ್ಮಣ್ಯ, ಸುಬ್ಬಯ್ಯ ಸೇರಿದಂತೆ ಹಲವರಿದ್ದರು.