ಹೊಸನಗರ: ಇಲ್ಲಿನ ಸರ್ಕಾರಿ ಶಾಸಕರ ಮಾದರಿ ಹೆಣ್ಣು ಮಕ್ಕಳ ಶಾಲೆಯಿಂದ ಕಲ್ಲುಹಳ್ಳ ಸೇತುವೆವರೆಗೆ ಪಟ್ಟಣ ಪಂಚಾಯತಿ ವ್ಯಾಪ್ತಿಯ ರಸ್ತೆ ಕಾಮಗಾರಿಯನ್ನು ತೀರ್ಥಹಳ್ಳಿ ನ್ಯಾಶನಲ್ ಗುತ್ತಿಗೆದಾರರು ಮಾಡಲಾಗಿದ್ದು ಈ ರಸ್ತೆಯ ಎರಡು ಬದಿಯಲ್ಲಿ ಹಾಕಿರುವ ಇಂಟರ್ ಲಾಕ್ ಕಾಮಗಾರಿ ಕಳಪೆಯಿಂದ ಕೂಡಿದೆ ಎಂದು ಪಾದಚಾರಿಗಳು ದೂರುತ್ತಿದ್ದಾರೆ.
ಸುಮಾರು ಮೂರು ತಿಂಗಳಿಂದ ಹೊಸನಗರ ತಾಲ್ಲೂಕಿನ ಮೇಲಿನಬೆಸುಗೆ ಗ್ರಾಮ ಪಂಚಾಯತಿ ವ್ಯಾಪ್ತಿಯಿಂದ ಹೊಸನಗರದ ಶಾಸಕರ ಹೆಣ್ಣು ಮಕ್ಕಳ ಶಾಲೆಯವರೆಗೆ ಹೈವೇ ಕಾಮಗಾರಿಯನ್ನು ತೀರ್ಥಹಳ್ಳಿ ನ್ಯಾಶನಲ್ ಗುತ್ತಿಗೆದಾರರು ಕೈಗೊಂಡು ಸುಮಾರು 15 ದಿನಗಳ ಹಿಂದೆ ಕಾಮಗಾರಿ ಮುಕ್ತಾಯ ಮಾಡಲಾಗಿದೆ.
ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ನೋಡುಗರಿಗೆ ಚೆಂದ ಕಾಣುವ ಉದ್ದೇಶದಿಂದ ಹೆಣ್ಣು ಮಕ್ಕಳ ಶಾಲೆಯಿಂದ ಕೆ.ಇ.ಬಿ ಕಚೇರಿ ಯವರೆಗೆ ರಸ್ತೆಯ ಎರಡೂ ಬದಿ ಇಂಟರ್ ಲಾಕ್ ಹಾಕಲಾಗಿತ್ತು. ಹೊಸನಗರದಲ್ಲಿ ಬಿದ್ದ ಒಂದೆರಡು ಮಳೆಗೆ ಇಂಟರ್ ಲಾಕ್ ಹಾಕಿರುವ ಜಾಗದಲ್ಲಿ ಗುಳಿಗಳು (ಹೊಂಡಗಳು) ಬಿದ್ದಿದ್ದು ಪಾದಚಾರಿಗಳು ಅಪ್ಪಿ-ತಪ್ಪಿ ಲಾಕರ್ ಹಾಕಿರುವ ಜಾಗದಲ್ಲಿ ಓಡಾಟ ನಡೆಸಿದರೆ ಇಲ್ಲಿ ಕಾಲು ಮುರಿದು ಹೋಗುವುದು ಗ್ಯಾರಂಟಿ ಎನ್ನಲಾಗಿದೆ.
ತಕ್ಷಣ ಸರಿಪಡಿಸಲು ಗುತ್ತಿಗೆದಾರರಿಗೆ ಸೂಚಿಸಿ:
ಇನ್ನೂ ಒಂದೆರಡು ದಿನಗಳಲ್ಲಿ ಶಾಲೆ, ಕಾಲೇಜುಗಳು ಆರಂಭವಾಗಲಿದ್ದು ಅದು ಅಲ್ಲದೇ ಮಳೆಗಾಲವೂ ಪ್ರಾರಂಭವಾಗಲಿದ್ದು ಅನಾಹುತವಾಗುವುದಕ್ಕಿಂತ ಮುಂಚಿತವಾಗಿ ಅಧಿಕಾರಿಗಳು ಎಚ್ಚೆತ್ತುಕೊಂಡು ಇಂಟರ್ ಲಾಕ್ ಹಾಕಿರುವ ಕಡೆಗಳಲ್ಲಿ ಹಾಳಾಗಿರುವುದನ್ನು ಸರಿಪಡಿಸಿದರೆ ಒಳ್ಳೆಯದು ಇಲ್ಲವಾದರೆ ಮುಂದೆ ಆಗುವ ಎಲ್ಲ ಅನಾಹುತಗಳಿಗೆ ಸಂಪೂರ್ಣ ಜವಾಬ್ದಾರಿ ಗುತ್ತಿಗೆದಾರರು ಮತ್ತು ಅಧಿಕಾರಿಗಳೇ ಆಗಿದ್ದು ತಕ್ಷಣ ಸರಿಪಡಿಸಲು ಮುಂದಾಗಲಿ ಎಂದು ಪಾದಚಾರಿಗಳು ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.