ಹೊಸನಗರ : ತಾಲೂಕಿನ ನಿಟ್ಟೂರು ಪರಮದೇವ ವೃತ್ತದಲ್ಲಿ ನಿತ್ಯ ಸಂಚಾರ ಮಾಡುವ ಬಸ್ ಸೇರಿದಂತೆ ಎಲ್ಲಾ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ಮನಬಂದಂತೆ ನಿಲ್ಲಿಸುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ನಗರ ಪೊಲೀಸ್ ಠಾಣೆ ಪಿಎಸ್ಐ ರಮೇಶ್ ಶುಕ್ರವಾರ ಸ್ಥಳಕ್ಕೆ ಧಾವಿಸಿ ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ವಾಹನ ಸವಾರರಿಗೆ ಚುರುಕು ಮುಟ್ಟಿಸಿದ್ದಾರೆ.
ಸದಾ ಪ್ರವಾಸಿಗರಿಂದ ಗಿಜಿಗುಡುವ ನಿಟ್ಟೂರು ಪೇಟೆಯಲ್ಲಿ ವಾಹನಗಳನ್ನು ರಸ್ತೆಯ ಮೇಲೆಯೇ ಬೇಕಾಬಿಟ್ಟಿ ನಿಲ್ಲಿಸುತ್ತಾರೆ ಹಾಗೂ ಪರಮದೇವ ವೃತ್ತಕ್ಕೆ ಹೊಂದಿಕೊಂಡಿರುವ ರಾಮೇಶ್ವರ ದೇವಸ್ಥಾನದ ಆವರಣದೊಳಗೆ ಪ್ರವಾಸಿಗರು ಮಲ-ಮೂತ್ರ ವಿಸರ್ಜನೆ ಮಾಡಿ ಗಲೀಜು ಮಾಡುತ್ತಿದ್ದಾರೆ. ಪರಮದೇವ ವೃತ್ತದಲ್ಲಿ ವಾಹನ ನಿಲುಗಡೆಯಿಂದ ಪಾದಚಾರಿಗಳಿಗೆ ತೀವ್ರ ತೊಂದರೆ ಉಂಟಾಗಿದೆ. ಈ ವ್ಯವಸ್ಥೆಯನ್ನು ಕೂಡಲೇ ಸರಿಪಡಿಕೊಡುವಂತೆ ಸ್ಥಳೀಯರು ಗ್ರಾಮಪಂಚಾಯಿತಿಗೆ ದೂರು ನೀಡಿದ್ದರು. ಈ ದೂರಿನನನ್ವಯ ನಗರ ಪೊಲೀಸ್ ಪಿಎಸ್ಐ ಧಾವಿಸಿ ವಾಹನ ಸವಾರರಿಗೆ ವಾಹನ ನಿಲುಗಡೆ ಮಾಡಲು ಮಾರ್ಗಸೂಚಿ ನೀಡಿದ್ದಾರೆ.