ರಿಪ್ಪನ್ಪೇಟೆ: 12ನೇ ಶತಮಾನದಲ್ಲಿ ಇದ್ದ ಅಸಮಾನತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಸಮಾನತೆಯನ್ನು ಸಾರಿದ ಮಹಾನ್ ಪುರುಷ ಬಸವಣ್ಣ. ಜಾತಿ ಭೇದ ಭಾವನೆಯನ್ನು ಹೋಗಲಾಡಿಸುವ ಮೂಲಕ ಮಾನವೀಯತೆಗೆ ಹೆಚ್ಚು ಒತ್ತು ನೀಡಿ ಗಂಡು, ಹೆಣ್ಣು ಇಬ್ಬರು ಒಂದೇ ಎಂಬ ಭಾವನೆಯನ್ನು ಮೂಡಿಸಿದ್ದಲ್ಲದೆ ಅದರಂತೆ ನಡೆದುಕೊಂಡರು ಎಂದು ಆನಂದಪುರ ಮುರುಘಾರಾಜೇಂದ್ರ ಮಠದ ಜಗದ್ಗುರು ಡಾ.ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಮಹಾಸ್ವಾಮಿಜಿ ಹೇಳಿದರು.
ಮೂಲೆಗದ್ದ ಸದಾನಂದ ಶಿವಯೋಗಾಶ್ರಮದಲ್ಲಿ ಬಸವ ಜಯಂತಿ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ಮೂಢನಂಬಿಕೆ ತೊರೆದು ವೈಚಾರಿಕೆ ಬೆಳಸಿಕೊಳ್ಳಬೇಕು.ಆಗ ಮಾತ್ರ ಬಸವಣ್ಣರವರಿಗೆ ಹತ್ತಿರವಾಗಲು ಸಾಧ್ಯವೆಂದರು.
ಮೂಲೆಗದ್ದೆ ಮಠದ ಅಭಿನಯ ಚನ್ನಬಸವ ಮಹಾಸ್ವಾಮಿಜಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದಲ್ಲಿ ಸಮಾನತೆಗಾಗಿ ಸಂಘರ್ಷಗಳು ನಡೆಯುತ್ತಿವೆ. ಸಮಾಜದ ತುಂಬೆಲ್ಲಾ ಜಾತಿ, ಧರ್ಮ, ಮೇಲು ಕೀಳು ಭಾವನೆಯಿಂದ ಸಮಾನತೆ ದೂರಾಗಿದೆ. ಮನುಷ್ಯರನ್ನು ಮನುಷ್ಯರ ರೀತಿ ನೋಡುವ ಕಾರ್ಯವಾಗುತ್ತಿಲ್ಲ. ಈ ಎಲ್ಲಾ ಕಾರಣಗಳಿಂದ ಬಸವಣ್ಣನವರ ಮಾನವತಾವಾದಿ ವಿಚಾರಗಳನ್ನು ಇಂದಿನ ಮುನುಕುಲಕ್ಕೆ ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.
ಬಸವಜಯಂತಿ ಕಾರ್ಯಕ್ರಮದಲ್ಲಿ ಗುತ್ತಲಕಲ್ಮಠದ ಪ್ರಭುಮಹಾಸ್ವಾಮಿಜಿ, ಜಡೆ ಮಠದ ಸಿದ್ದವೃಷಭೇಂದ್ರ ಮಹಾಸ್ವಾಮಿಜಿ, ಸಾಗರ ತಾಲ್ಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಹಕ್ರೆ ಮಲ್ಲಿಕಾರ್ಜುನ, ಹೊಸನಗರ ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯ ಬಿ.ಯುವರಾಜ್, ಚಂದ್ರಮೌಳಿಗೌಡರು, ಜಯಶೀಲಪ್ಪಗೌಡರು, ಜಬ್ಬಗೋಡು ಹಾಲಪ್ಪಗೌಡ, ಕಲ್ಯಾಣಪ್ಪಗೌಡ, ಇನ್ನಿತರರು ಹಾಜರಿದ್ದರು.