HOSANAGARA | ತಾಲ್ಲೂಕಿನ ಸಾಗರ ರಸ್ತೆಯ ರಾಜ್ಯ ಹೆದ್ದಾರಿಯ ಅರಳಿಕೊಪ್ಪ ಎಂಬಲ್ಲಿ ಭಾನುವಾರ ರಾತ್ರಿ ರಸ್ತೆಗೆ ಅಡ್ಡಲಾಗಿ ಬೃಹತ್ ಗಾತ್ರದ ಮರ ಉರುಳಿ ಮೆಸ್ಕಾಂ ಇಲಾಖೆಗೆ ಸೇರಿದ ವಿದ್ಯುತ್ ಕಂಬಗಳು ಜಖಂಗೊಂಡು ಅಂದಾಜು 50 ಸಾವಿರ ರೂ. ನಷ್ಟು ನಷ್ಟ ಸಂಭವಿಸಿದ ಘಟನೆ ನಡೆದಿದೆ.
ಭಾನುವಾರ ಸಂಜೆ ಹೊಸನಗರ ತಾಲ್ಲೂಕಿನಲ್ಲಿ ಗಾಳಿ ಸಹಿತ ಭಾರಿ ಮಳೆಯಾಗಿದ್ದು ಪರಿಣಾಮ ಬೃಹತ್ ಗಾತ್ರದ ನೆರಳೆಮರ ಬುಡ ಸಹಿತ ಧರಾಶಾಹಿಯಾಗಿ ವಿದ್ಯುತ್ ಕಂಬಗಳು, ತಂತಿ ತುಂಡಾಗಿದೆ. ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ.
ಅಧಿಕಾರಿಗಳು ಭೇಟಿ:
ಘಟನಾ ಸ್ಥಳಕ್ಕೆ ಮೆಸ್ಕಾಂ ಇಲಾಖೆಯ ಸಹಾಯಕ ಇಂಜಿನಿಯರ್ ಚಂದ್ರಶೇಖರ್ ಹಾಗೂ ಸಿಬ್ಬಂದಿಗಳು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿಗಳು, ಮೆಸ್ಕಾಂ ಗುತ್ತಿಗೆದಾರ ಪ್ರಶಾಂತ್ ತುರ್ತು ಭೇಟಿ ನೀಡಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಯಾವುದೇ ಹಾನಿಯಾಗದಂತೆ ತಡೆದಿದ್ದಾರೆ.