THIRTHAHALLI | ಚಲಿಸುತ್ತಿದ್ದ ಬೈಕ್ ಮೇಲೆ ಮರ ಉರುಳಿ ಬಿದ್ದ ಪರಿಣಾಮ ಯುವಕ ಸ್ಥಳದಲ್ಲೇ ಮೃತಪಟ್ಟ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಹಾದಿಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೀನ್ಮನೆಕೊಪ್ಪ ಎಂಬಲ್ಲಿ ತಡರಾತ್ರಿ ನಡೆದಿದೆ.
ರಾಮಪ್ಪ (26) ಯುವಕ ಮೃತಪಟ್ಟ ಯುವಕ. ಕೋಣಂದೂರಿಗೆ ತೆರಳಿದ್ದ ರಾಮಪ್ಪ ಮನೆಗೆ ಹಿಂದಿರುಗುವಾಗ ಈ ಘಟನೆ ನಡೆದಿದೆ. ನಿತ್ಯದ ದಾರಿಯಲ್ಲಿ ಮರ, ವಿದ್ಯುತ್ ತಂತಿ, ಕಂಬ ಬಿದ್ದಿರುವ ಹಿನ್ನಲೆಯಲ್ಲಿ ಸಾವು ತಪ್ಪಿಸಿಕೊಳ್ಳಲು ಬದಲಿ ಮಾರ್ಗವನ್ನು ಬಳಸಿ ಹೋಗುತ್ತಿದ್ದರು. ಆದರೆ ಬದಲಿ ಮಾರ್ಗದಲ್ಲಿ ಚಲಿಸುತ್ತಿರುವಾಗಲೇ ಬೈಕ್ ಮೇಲೆ ಇರುವಂತೆ ಅಕೇಶಿಯ ಮರವೊಂದು ಕುತ್ತಿಗೆಗೆ ಅಪ್ಪಳಿಸಿದೆ. ಇದರಿಂದ ಸ್ಥಳದಲ್ಲೇ ಅಸುನೀಗಿದ್ದಾರೆ.
ರಾಮಪ್ಪ ಸಕಾಲಕ್ಕೆ ಮನೆಗೆ ಬಾರದೆ ಇರುವುದನ್ನು ಗಮನಿಸಿದ ಕುಟುಂಬಸ್ಥರು ಹುಡುಕಾಟ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶುಕ್ರವಾರ ರಾತ್ರಿ 12.30 ಸುಮಾರಿಗೆ ಸ್ಥಳಕ್ಕೆ ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಪ್ರಶಾಂತ್ ಕುಕ್ಕೆ, ತಾಲ್ಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಧುರಾಜ ಹೆಗ್ಡೆ ಭೇಟಿ ಕೊಟ್ಟಿದ್ದು ಗ್ರಾಮಸ್ಥರೊಂದಿಗೆ ಸಮಾಲೋಚಿಸಿ ಅಧಿಕಾರಿಗಳಿಗೆ ಕರೆ ಮಾಡಿದ್ದಾರೆ. ಆದರೆ ಯಾವುದೇ ಅಧಿಕಾರಿಗಳು ಫೋನ್ ಸ್ವೀಕರಿಸುತ್ತಿಲ್ಲ. ಅರಣ್ಯ ಇಲಾಖೆ ಮೇಲೆ ಕೊಲೆ ಪ್ರಕರಣ ದಾಖಲಿಸುವಂತೆ ಆಗ್ರಹಿಸುತ್ತಿದ್ದಾರೆ.
ಕೋಣಂದೂರು ಸಮೀಪದ ದೇಮ್ಲಾಪುರ ಎಂಬಲ್ಲಿ ಮೂರು ತಿಂಗಳ ಹಿಂದಷ್ಟೇ ಬೈಕ್ ಮೇಲೆ ಮರಬಿದ್ದು ವ್ಯಕ್ತಿ ಮೃತಪಟ್ಟ ಘಟನೆ ನಡೆದಿತ್ತು.