ಸೊರಬ: ಬಿರುಸಿನ ಗಾಳಿ ಸಮೇತ ಸುರಿದ ಮಳೆಗೆ (Rain) ವಿದ್ಯುತ್ ಕಂಬಗಳು ಹಾಗೂ ಮರ ಧರೆಗೆ ಉರುಳಿದ ಘಟನೆ ಚಂದ್ರಗುತ್ತಿ ಸಮೀಪದ ಜೋಳದ ಗುಡ್ಡೆ ಗ್ರಾಮದ ಮುಖ್ಯರಸ್ತೆಯಲ್ಲಿ ಮಂಗಳವಾರ ಸಂಜೆ ನಡೆದಿದೆ.
ಮಧ್ಯಾಹ್ನದ ವರೆಗೆ ಬಿರು ಬಿಸಿಲಿನಿಂದ ಕೂಡಿದ ವಾತಾವರಣ ನಂತರ ಮೋಡ ಕವಿದು ಬಿರುಸಿನ ಗಾಳಿ ಸಮೇತ ಮಳೆ ಬೀಳಲಾರಂಭಿಸಿತು. ಗಾಳಿ ಮಳೆಗೆ ಜೋಳದ ಗುಡ್ಡೆ ಗ್ರಾಮದಲ್ಲಿ ಬೃಹತ್ ಮರವೊಂದು ವಿದ್ಯುತ್ ತಂತಿ ಮೇಲೆ ಉರುಳಿ ರಸ್ತೆಗೆ ಅಡ್ಡಲಾಗಿ ಧರೆಗೆ ಉರುಳಿತು. ಪರಿಣಾಮ ಸುಮಾರು ಮೂರು ವಿದ್ಯುತ್ ಕಂಬಗಳು ಮುರಿದು ಹೋಗಿದ್ದು, ಕೆಲ ಸಮಯ ಸೊರಬ ಚಂದ್ರಗುತ್ತಿ ಮಾರ್ಗದಲ್ಲಿ ವಾಹನಗಳ ಸಂಚಾರಕ್ಕೆ ತೊಡಕಾಯಿತು.
ವಿಷಯ ತಿಳಿದು ಸ್ಥಳಕ್ಕೆ ಮೆಸ್ಕಾಂ ಸಿಬ್ಬಂದಿ ಆಗಮಿಸಿದರು. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳೀಯರ ನೆರವಿನೊಂದಿಗೆ ಮರವನ್ನು ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಗ್ರಾಪಂ ಸದಸ್ಯ ಲೋಕೇಶ್ ಸೇರಿದಂತೆ ಇತರರು ಅಧಿಕಾರಿಗಳಿಗೆ ಸಹಕಾರ ನೀಡಿದರು.
ಚಂದ್ರಗುತ್ತಿ ಹೋಬಳಿ ವ್ಯಾಪ್ತಿಯ ಬಹುತೇಕ ಕಡೆ ಮಳೆಯಾಗಿದ್ದು, ಬಿಸಿಲಿನಿಂದ ಕಾದ ಇಳೆಗೆ ಮಳೆ ತಂಪೆರೆದಿದಂತಾಗಿದೆ.