MALNAD TIMES | 25 JUNE 2024
SHIKARIPURA | ಸಾಲೂರು ಹಿರೇಮಠದ ಗುರುಕುಲದಲ್ಲಿ ಲಿಂ.ಪಂಚಾಕ್ಷರ ಶಿವಾಚಾರ್ಯ ಸ್ವಾಮಿಗಳವರಿಂದ ವಿದ್ಯೆ ಪಡೆದ ಅನೇಕರು ಇಂದು ಉನ್ನತ ಸ್ಥಾನಗಳಲ್ಲಿದ್ದಾರೆ. ಲಿಂ.ಪಂಚಾಕ್ಷರ ಶ್ರೀಗಳ ಪಾಂಡಿತ್ಯ ಅಪೂರ್ವವಾಗಿತ್ತು ಎಂದು ಸಾಲೂರು ಹಿರೇಮಠದ ಗುರುಲಿಂಗ ಜಂಗಮ ಶಿವಾಚಾರ್ಯ ಸ್ವಾಮಿಗಳು ಹೇಳಿದರು.
ಸೋಮವಾರ ಸಾಲೂರು ಹಿರೇಮಠದಲ್ಲಿ ಜರುಗಿದ ಲಿಂ. ಲಿಂ.ಪಂಚಾಕ್ಷರ ಶಿವಾಚಾರ್ಯ ಸ್ವಾಮಿಗಳವರ 32ನೇ ವರ್ಷದ ಪುಣ್ಯಾರಾಧನೆ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಲಿಂ. ಚನ್ನವೀರ ಶಿವಾಚಾರ್ಯ ಸ್ವಾಮಿಗಳವರ ಹಾಗೂ ಲಿಂ.ಪಂಚಾಕ್ಷರ ಶಿವಾಚಾರ್ಯ ಸ್ವಾಮಿಗಳವರ ಅವಧಿಯಲ್ಲಿ ಸಾಲೂರು ಹಿರೇಮಠದ ಗುರುಕುಲ ಉಚ್ಛ್ರಾಯ ಸ್ಥಿತಿಯಲ್ಲಿದ್ದುದು ಹೆಮ್ಮಯ ಸಂಗತಿಯಾಗಿದೆ. ಅವರು ಪ್ರಾರಂಭಿಸಿದ ವೀರಶೈವ ವೇದಾಧ್ಯಯನ ಶಿಬಿರದಲ್ಲಿ ಇದುವರೆಗೆ ಸಾವಿರಾರು ಜನರು ಪಾಲ್ಗೊಂಡು ಧರ್ಮಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಲಿಂ. ಪಂಚಾಕ್ಷರ ಶ್ರೀಗಳು ಸಾಲೂರು ಹಿರೇಮಠಕ್ಕೆ ನೀಡಿದ ಕೊಡುಗೆಯನ್ನು ಮರೆಯುವಂತಿಲ್ಲ ಎಂದರು.
ಗುಬ್ಬಿ ತಾಲೂಕ ತೇವಡಿಹಳ್ಳಿ ಚನ್ನಬಸವೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಸಾಲೂರು ಹಿರೇಮಠದಲ್ಲಿ ಗುರುಕುಲ ಪುನಶ್ಚೇತನಗೊಂಡು ಪುನಃ ಕಾರ್ಯ ನಿರ್ವಹಿಸುವಂತಾಗಲಿ. ಮಠಗಳಿಗೆ ಭಕ್ತರ ಸಹಕಾರ ಅವಶ್ಯವಾಗಿದೆ ಎಂದರು. ತೊಗರ್ಸಿ ಪಂಚವಣ್ಣಿಗೆಮಠದ ಚನ್ನವೀರ ದೇಶಿಕೇಂದ್ರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಹುಟ್ಟು ಆಕಸ್ಮಿಕ ಸಾವು ಅನಿವಾರ್ಯ ಈ ಮಧ್ಯದಲ್ಲಿ ನಾವುಗಳು ಏನನ್ನಾದರೂ ಸಾಧಿಸುವುದು ಅವಶ್ಯಕವಾಗಿದೆ. ಲಿಂ.ಪಂಚಾಕ್ಷರ ಶ್ರೀಗಳು ಯಾರೂ ಮಾಡದಂತಹ ಸಾಧನೆಯನ್ನು ಆಧ್ಯಾತ್ಮ ಲೋಕದಲ್ಲಿ ಮಾಡಿ ತೋರಿಸಿದ್ದಾರೆ. ಅವರ ಸಾಮಿಪ್ಯದ ಸುಖವನ್ನುಂಡ ನಾವುಗಳ ಧನ್ಯರು. ಅವರು ಬೋಧಿಸಿದ ಹಿತ ವಚನಗಳು ನಮಗೆ ಮಾರ್ಗದರ್ಶಿಯಾಗಿವೆ ಎಂದರು.
ವೇ|| ನಂಜಪ್ಪ ತೌಡಿಹಳ್ಳಿ, ಚನ್ನಬಸಯ್ಯ ತೌಡಿಹಳ್ಳಿ, ಗದಗಯ್ಯ ಚಂದಾಪುರ, ಗುರುವಣ್ಣ ಚಿಕ್ಕನಾಯಕನಹಳ್ಳಿ, ಗಂಗಣ್ಣ, ಸಿ.ಎಚ್.ಬಾಳನಗೌಡ್ರ, ಮೇಘರಾಜ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಸಾಲೂರಿನ ಕೆ.ಎಸ್.ರುದ್ರಮೂರ್ತಿ ಪ್ರಾಸ್ತಾವಿಕ ಮಾತನಾಡಿದರು. ಗುರುಸ್ವಾಮಿ ವಿಜಯಪುರ ವೇದಘೋಷ ಮಾಡಿದರು. ಚಂದ್ರಯ್ಯ ಸ್ವಾಗತಿಸಿದರು. ಶಿಕಾರಿಪುರದ ಪುಟ್ಟಯ್ಯ ಶಾಸ್ತ್ರಿಗಳು ನಿರೂಪಿಸಿದರು.
ಶಿಕಾರಿಪುರದ ನಿರ್ಮಲ ಪ್ರಾರ್ಥನೆ ಹಾಡಿದರು. ಆಗಮಿಸಿದ ಸರ್ವರಿಗೂ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.