ಸೊರಬ: ಬಾಲ್ಯದಿಂದಲೇ ಆರ್.ಎಸ್.ಎಸ್ ಸ್ವಯಂಸೇವಕನಾದ ನನಗೆ ಸಂಘ ಪರಿವಾರದ ಪರಿಚಯವಿದೆ ಎಂದು ನೈರುತ್ಯ ಪದವೀಧರರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಧನಂಜಯ ಸರ್ಜಿ (Dr. Dhananjaya Sarji) ಸ್ಪಷ್ಟಪಡಿಸಿದರು.
ಶಿವಮೊಗ್ಗದ (Shivamogga) ಬಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆಯ ತರುವಾಯ ಎಡಪಂಥೀಯರು ಮತ್ತು ಕಮ್ಯುನಿಷ್ಟರು ನಡೆಸಿದ ಶಾಂತಿಯಾತ್ರೆಯಲ್ಲಿ ಪಾಲ್ಗೊಂಡ ಕುರಿತು ಪಟ್ಟಣದಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಾ. ಧನಂಜಯ ಸರ್ಜಿ, ಬಾಲ್ಯದಿಂದಲೇ ಬಸವೇಶ್ವರ ನಗರದ ಶಾಖೆಯಿಂದ ಸಂಘದ ಆರ್ಎಸ್ಎಸ್ ಸ್ವಯಂಸೇವಕನಾಗಿದ್ದು, ನಂತರ ಪ್ರಾಥಮಿಕ ಶಿಕ್ಷಾವರ್ಗ, ಸಂಘ ಶಿಕ್ಷಾವರ್ಗವನ್ನು 30 ವರ್ಷದ ಹಿಂದೆಯೇ ಪೂರ್ಣ ಮಾಡಿದ್ದೇನೆ. ಜೊತೆಯಲ್ಲಿ ವೈದ್ಯಕೀಯ ಶಿಕ್ಷಣ ಪೂರೈಸುವ ವೇಳೆ ಸಂಘ ನೀಡಿದ ಜವಾಬ್ದಾರಿ ನಿರ್ವಹಿಸಿದ್ದೇನೆ.
ಹರ್ಷ ಹತ್ಯೆಯ ನಂತರ ಶಿವಮೊಗ್ಗದಲ್ಲಿ ವ್ಯಾಪಾರ-ವಹಿವಾಟು ಹಿನ್ನೆಡೆಯಾಗಿತ್ತು. ಇದರಿಂದ ಶಾಂತಿಯಾತ್ರೆಯಲ್ಲಿ ಪಾಲ್ಗೊಂಡಿದ್ದೆನು. ಆದರೆ, ಬಾಲ್ಯದಿಂದಲೇ ನನಗೆ ಸಂಘದ ಪರಿಚಯವಿದೆ. ಕೆಲವರು ತಮ್ಮ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಕಾಂಗ್ರೆಸ್ನಿಂದ ಬಂದಿದ್ದೇನೆ ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಆದರೆ, ವಿಕಾಸ ಟ್ರಸ್ಟ್ನ ಜವಾಬ್ದಾರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗಿದ್ದೇನೆ ಎಂದರು.