ಸೊರಬ: ಡಾ.ಧನಂಜಯ ಸರ್ಜಿ (Dr. Dhananjaya Sarji) ಅವರ ವೈದ್ಯ ವೃತ್ತಿಯ ಅನುಭವ ಹಾಗೂ ಪದವೀಧರರ ಸಂಪೂರ್ಣ ಸಮಸ್ಯೆಗಳ ಅರಿವು ಅವರಿಗಿರುವುದರಿಂದ ಪರಿಷತ್ ಗೆ ಆಯ್ಕೆ ಮಾಡಿದರೆ ಪದವೀಧರರು ಮತ್ತು ಶಿಕ್ಷಕರ ಸಮಸ್ಯೆಗಳಿಗೆ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಾರೆಂಬ ವಿಶ್ವಾಸವಿದೆ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ (Kumar Bangarappa) ಹೇಳಿದರು.
ನೈರುತ್ಯ ಪದವೀದರ ಮತ್ತು ಶಿಕ್ಷಕರ ಕ್ಷೇತ್ರ ಚುನಾವಣೆ ಹಿನ್ನೆಲೆ ಆಲಮಟ್ಟಿಯ ವಾಸವಿ ಕಲ್ಯಾಣ ಮಂಟಪದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸೊರಬ ಮಂಡಲ ಮತದಾರರ ಮತ್ತು ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿ, ಡಾ.ಧನಂಜಯ ಸರ್ಜಿ ಹಾಗೂ ಶಿಕ್ಷಕರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಸ್.ಎಲ್.ಭೋಜೇಗೌಡ ಅವರ ಗೆಲುವಿಗಾಗಿ ಎಲ್ಲ ಮುಖಂಡರು , ಕಾರ್ಯಕರ್ತರು ಒಂದಾಗಿ ಶ್ರಮಿಸೋಣ ಎಂದರು.
ಈ ಹಿಂದೆ ಬಿಜೆಪಿಯಲ್ಲಿದ್ದುಕೊಂಡು ವಿಧಾನ ಪರಿಷತ್ ಗೆ ಆಯ್ಕೆಯಾಗಿದ್ದ ಆಯನೂರು ಮಂಜುನಾಥ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಮತ ಕೇಳುತ್ತಿದ್ದಾರೆಂದರೆ ಕಳೆದ ಪರಿಷತ್ ಚುನಾವಣೆಯಲ್ಲಿ ಹಿಂದೆ ಮತ ನೀಡಿದ ಪದವೀದರ ಮತದಾರರನ್ನು ತಿರಸ್ಕರಿಸಿದ್ದಾರೆ ಎಂದರ್ಥ ಎಂದು ಟೀಕಿಸಿದರು.
ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಮಾತನಾಡಿ, ಹುಟ್ಟಿದಾಗ ಉಸಿರುತ್ತೆ, ಹೆಸರಿರೋದಿಲ್ಲ, ಸಾಯುವಾಗ ಹೆಸರಿರುತ್ತೆ ಉಸಿರಿರೋದಿಲ್ಲ, ಈ ಉಸಿರು ಮತ್ತು ಹೆಸರಿನ ನಡುವೆ ಇರುವ ಜೀವನ ಮತ್ತು ಕಾಲವನ್ನು ನಾವು ಸಾಧನೆ ಮಾಡುವ ಮೂಲಕ, ನಿಸ್ವಾರ್ಥ ಸಮಾಜ ಸೇವೆ ಮಾಡುವ ಮೂಲಕ ಸಾರ್ಥಕಗಳಿಸಿಕೊಳ್ಳಬೇಕು. ಜನಸೇವೆ ಸೇವೆ ಮಾಡಬೇಕೆಂಬ ತುಡಿತದಿಂದ ಈ ಕ್ಷೇತ್ರಕ್ಕೆ ಬಂದಿದ್ದೇನೆ, ವಿಧಾನ ಪರಿಷತ್ ಪ್ರವೇಶಿಸಿ ಪದವೀಧರರ ಸೇವೆ ಮಾಡುವ ಅವಕಾಶವನ್ನು ತಾವೆಲ್ಲರೂ ಮಾಡಿಕೊಡಬೇಕೆಂದು ಮನವಿ ಮಾಡಿದರು.
ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಮಂಡಲ ಅಧ್ಯಕ್ಷರಾದ ಪ್ರಕಾಶ್, ರಾಜ್ಯ ಪ್ರಕೋಷ್ಟಗಳ ಸಂಯೋಜಕರಾದ ಎಸ್.ದತ್ತಾತ್ರಿ ಅವರು ಅಭ್ಯರ್ಥಿಗಳ ಪರವಾಗಿ ಮತಯಾಚಿಸಿದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಾಲತೇಶ್, ಓಬಿಸಿ ಮೋರ್ಚಾದ ಅಧ್ಯಕ್ಷರಾದ ಎಂ. ಡಿ. ಉಮೇಶ್, ತಾಲ್ಲೂಕು ಮುಖಂಡರಾದ ದೇವೇಂದ್ರಪ್ಪ, ಮಂಡಲದ ಅಧ್ಯಕ್ಷರಾದ ಪ್ರಕಾಶಣ್ಣ ತಲಕಾಲಕೊಪ್ಪ, ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಶಿವಕುಮಾರ್ ಕಡಸೂರು ಮುಖಂಡರಾದ ಗೀತಾ ಮಲ್ಲಿಕಾರ್ಜುನ, ಗುರುಕುಮಾರ ಪಾಟೀಲ್, ಕೊಟ್ರೇಶ್ ಹಾಗೂ ಭಾರತೀಯ ಜನತಾ ಪಾರ್ಟಿಯ ಎಲ್ಲಾ ಮುಖಂಡರು ಹಾಗೂ ಪದವೀಧರ ಕ್ಷೇತ್ರದ ಮತದಾರರು ಭಾಗವಹಿಸಿದ್ದರು.