SORABA | ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ಧ ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಸ್ಥಾನದ ಕಾಣಿಕೆ ಹುಂಡಿ ಎಣಿಕೆ ಕಾರ್ಯ ದೇವಸ್ಥಾನದ ಆಡಳಿತ ಮಂಡಳಿ ಕಚೇರಿಯಲ್ಲಿ ಗುರುವಾರ ನಡೆಯಿತು.
ಸೊರಬ ತಾಲೂಕು ದಂಡಾಧಿಕಾರಿ ಹುಸೇನ್ ಸರಕಾವಸ್ ಅವರ ಸಮ್ಮುಖದಲ್ಲಿ ಜಾತ್ರೆ, ಮತ್ತು ಹುಣ್ಣಿಮೆ ನಂತರದಲ್ಲಿ ಭಕ್ತರ ಮೂಲಕ ಬಂದಂತಹ ಕಾಣಿಕೆ ಹುಂಡಿ ಹಣ ಏಣಿಕೆ ಕಾರ್ಯ ನಡೆಸಲಾಯಿತು.
ಕಳೆದ ಬಾರಿ ಕಾಣಿಕೆ ಹುಂಡಿ ಎಣಿಸಿದಾಗ 22,53,700 ರೂ. ಕಾಣಿಕೆ ಸಂಗ್ರಹವಾಗಿತ್ತು. ಈ ಬಾರಿ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿ 43,61,080, ರೂ. ಕಾಣಿಕೆ ಸಂಗ್ರಹವಾಗಿದೆ. ಹುಂಡಿ ಎಣಿಕೆ ಕಾರ್ಯ ನಡೆಯುವ ಕೊಠಡಿ ಸುತ್ತ ಸಿಸಿ ಕ್ಯಾಮೆರಾ ಅಳವಡಿಸಲಾಗಿತ್ತು.
ಕಾಣಿಕೆ ಹುಂಡಿ ಎಣಿಕೆ ಕಾರ್ಯದಲ್ಲಿ ನಾಡಕಚೇರಿ ಉಪ ತಹಶೀಲ್ದಾರ್ ಲಲಿತ , ಶಿರಸ್ತೇದಾರ್ ಎಸ್. ನಿರ್ಮಲ ಪ್ರಭಾಕರ್, ರಾಜಸ್ವ ನಿರೀಕ್ಷಕ ವಿ.ಎಲ್ ಶಿವಪ್ರಸಾದ್, ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಪ್ರಮೀಳಾ ಕುಮಾರಿ, ಮುಜರಾಯಿ ಇಲಾಖೆ ವಿಷಯ ನಿರ್ವಾಹಕಿ ಎಂ.ಶೃತಿ, ಹಾಗೂ ಕೆನರಾ ಬ್ಯಾಂಕ್ ಶಾಖೆಯ ಸಹಾಯಕ ವ್ಯವಸ್ಥಾಪಕರು, ಕಂದಾಯ ಇಲಾಖೆ ಗ್ರಾಮ ಲೆಕ್ಕಿಗರು, ಗ್ರಾಮ ಸಹಾಯಕರು, ದೇವಸ್ಥಾನದ ಸಿಬ್ಬಂದಿಗಳು ಪಾಲ್ಗೊಂಡಿದ್ದರು.