ಕಾಡು ಹಂದಿ (Wild Pig) ಶಿಕಾರಿಗೆ (Shikari) ಹೋದಾಗ ಮಿಸ್ ಫೈರ್ (Miss Fairing)…. ಗುಂಡು ತಗುಲಿ ಯುವಕ ಸ್ಥಳದಲ್ಲೇ ಸಾವು (Death).
ಚಿಕ್ಕಮಗಳೂರು: ಗುಂಡೇಟಿನಿಂದ ಯುವಕನೋರ್ವ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಉಳುವಾಗಿಲು ಗ್ರಾಮದಲ್ಲಿ ನಡೆದಿದೆ
ಮೃತನನ್ನು ಕೆರೆಮಕ್ಕಿ ಗ್ರಾಮದ ಸಂಜಯ್ (33) ಎಂದು ಗುರುತಿಸಲಾಗಿದೆ. ಸಂಜು ಮೃತದೇಹ ಉಳುವಾಗಿಲು ಸಮೀಪ ಮುಖ್ಯರಸ್ತೆಯಲ್ಲಿ ಬಿದ್ದಿದ್ದು, ಎದೆಗೆ ತೋಟಕೋವಿಯಿಂದ ಗುಂಡು ತಗುಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಕಂಡುಬಂದಿದೆ.
ಇನ್ನೂ ಮೃತದೇಹದ ಸಮೀಪವೇ ತೋಟದ ಬೇಲಿಯಲ್ಲಿ ತೋಟಕೋವಿಯೊಂದು ಪತ್ತೆಯಾಗಿದೆ.
ಶಿಕಾರಿಗೆ ತೆರಳಿದ ಸಂದರ್ಭದಲ್ಲಿ ಈ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಇದು ಆಕಸ್ಮಿಕವಾಗಿ ಗುಂಡು ತಗುಲಿ ಆಗಿರುವ ಸಾವೇ ಅಥವಾ ಉದ್ದೇಶಪೂರ್ವಕವಾಗಿ ಕೊಲೆ ಮಾಡಲಾಗಿದೆಯೇ ? ಎನ್ನುವ ಪ್ರಶ್ನೆಗಳು ಮೂಡಿವೆ.
ಮೃತ ಸಂಜಯ್ ಕೆರೆಮಕ್ಕಿ ಗ್ರಾಮದ ದಿ. ಜೂಲೇಗೌಡರ ಪುತ್ರ. ಅವಿವಾಹಿತನಾಗಿದ್ದು, ತಾಯಿ ಮತ್ತು ಸಹೋದರಿಯನ್ನು ಅಗಲಿದ್ದಾರೆ. ಈ ಸಂಬಂಧ ಮಲ್ಲಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ಸಂಜಯ್ ಜೊತೆಗೆ ಅದೇ ಗ್ರಾಮದ ನಿಸರ್ಗ , ಸುಮನ್ ಎಂಬುವರು ಶಿಕಾರಿಗೆ ತೆರಳಿದ್ದರು. ಕಾಡು ಹಂದಿ ಬೇಟೆಗೆ ತೆರಳಿದಂತಹ ಸಂದರ್ಭದಲ್ಲಿ ಮಿಸ್ ಫೈರ್ ನಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇಬ್ಬರು ವಶಕ್ಕೆ !
ಮಿಸ್ ಫೈರ್ ಆದ ಕೂಡಲೇ ನಿಸರ್ಗ ಸ್ಥಳದಿಂದ ಪರಾರಿಯಾಗುವ ಯತ್ನ ನಡೆಸಿದ್ದಾನೆ. ಈ ಸಮಯದಲ್ಲಿ ದಾರಿಯಲ್ಲಿ ಕಾಲುಜಾರಿ ಬಿದ್ದ ಪರಿಣಾಮ ನಿಸರ್ಗನ ಕೈನ ಮೂಳೆ ಮುರಿತವಾಗಿದೆ. ನಿಸರ್ಗ, ಸುಮನ್ ಅನ್ನೋ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಕೈ ಮುರಿತವಾಗಿರುವ ಹಿನ್ನೆಲೆಯಲ್ಲಿ ನಿಸರ್ಗನನ್ನು ಪೊಲೀಸರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.