KALASA | ಅನಾರೋಗ್ಯದಿಂದ ಬಳಲುತ್ತಿರುವ ಯುವಕನನ್ನು ಜೋಳಿಗೆಯಲ್ಲಿ ಹೊತ್ತು ಕಾಲು ಸಂಕ ದಾಟಿ ಕಾಲ್ನಡಿಗೆಯಲ್ಲಿ ತೆರಳಿ ಆಸ್ಪತ್ರೆಗೆ ಸೇರಿಸಲಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಸಂಸೆ ಸಮೀಪದ ಕೋಣೆಗೂಡು ಗ್ರಾಮದಲ್ಲಿ ನಡೆದಿದೆ.
19 ವರ್ಷದ ಅವಿನಾಶ್ ಎಂಬ ಅನಾರೋಗ್ಯದಿಂದ ಬಳಲುತ್ತಿರುವ ಯುವಕ. ಆಂಬುಲೆನ್ಸ್ ಬಂದರೂ ರಸ್ತೆ ಇಲ್ಲದ ಹಿನ್ನೆಲೆಯಲ್ಲಿ ಊರಿನಿಂದ 1.5 ಕಿ.ಮೀ. ದೂರದಲ್ಲಿ ನಿಲ್ಲಬೇಕಾಗಿದ್ದರಿಂದ ಈತನನ್ನು ಹೊತ್ತುಕೊಂಡೇ ಆಸ್ಪತ್ರೆಗೆ ಸಾಗಿಸಲಾಗಿದೆ.
ಚಿಕಿತ್ಸೆಗೆಂದು ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯಲೂ ಮೃತದೇಹ ತರಲೂ ಜೋಳಿಗೆಯೇ ಆಸರೆಯಾಗಿದೆ. ಆಂಬುಲೆನ್ಸ್ ಬಂದರೂ ಹಳ್ಳ ದಾಟಲು ಆಗುವುದಿಲ್ಲ. ಹೀಗಾಗಿ ಜೋಳಿಗೆಯಲ್ಲಿ ಹೊತ್ತುಕೊಂಡೇ ಕಾಲು ಸಂಕ ದಾಟಬೇಕಾಗಿದೆ.
ಅನಾರೋಗ್ಯ ಎದುರಾದರೆ ತಕ್ಷಣವೇ ಚಿಕಿತ್ಸೆಗೆ ಹೋಗಲಾಗದೇ ಪರದಾಡಬೇಕಾದ ಪರಿಸ್ಥಿತಿಯಿದ್ದು, ಗಂಭೀರ ಕಾಯಿಲೆ ಬಂದರೆ ಊರಿನ ಜನ ಒಂದು ಕೈಜೋಡಿಸಿದರೆ ಮಾತ್ರ ಜೀವ ಉಳಿಸಿಕೊಳ್ಳಲು ಸಾಧ್ಯ. ಸುಮಾರು 50ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿರುವ ಈ ಗ್ರಾಮದಲ್ಲಿ ಜೀವ ಉಳಿಸಿಕೊಳ್ಳಲು ಜನಪ್ರತಿನಿಧಿಗಳು ಸೇತುವೆ, ರಸ್ತೆ ಮಾಡಿ ಕೊಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.