ಚಿಕ್ಕಮಗಳೂರು: ಭಾರತ ಚುನಾವಣಾ ಆಯೋಗವು ಕರ್ನಾಟಕ ವಿಧಾನ ಪರಿಷತ್ತಿಗೆ ಕರ್ನಾಟಕ ನೈರುತ್ಯ ಪದವೀಧರ ಕ್ಷೇತ್ರ ಮತ್ತು ನೈರುತ್ಯ ಶಿಕ್ಷಕರ ಕ್ಷೇತ್ರಗಳ ಚುನಾವಣೆ 2024ಕ್ಕೆ ಸಂಬಂಧಿಸಿದಂತೆ ಜೂನ್ 3 ರಂದು ಮತದಾನ ಪ್ರಕ್ರಿಯೆ ನಡೆಯಲಿದ್ದು, ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಜೂನ್ 01 ರ ಸಂಜೆ 5 ಗಂಟೆಯಿಂದ ಜೂನ್ 3 ರ ಸಂಜೆ 05 ಗಂಟೆಯವರೆಗೆ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಎಲ್ಲಾ ರೀತಿಯ ಮದ್ಯ ಮಾರಾಟವನ್ನು ಎಲ್ಲಾ ನಮೂನೆಯ ಮದ್ಯದ ಅಂಗಡಿಗಳನ್ನು ಮುಚ್ಚುವಂತೆಯೂ ಹಾಗೂ ಮದ್ಯ ಬೀಯರ್ ಮದ್ಯಸಾರ ಇತ್ಯಾದಿ ಅಬಕಾರಿ ಪದಾರ್ಥಗಳ ಸಾಗಾಣಿಕೆಗೆ ಶೇಖರಣೆ ತಯಾರಿಕೆ ಸರಬರಾಜು ಮತ್ತು ಮಾರಾಟ ಮಾಡುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಮೀನಾ ನಾಗರಾಜ್ ಸಿ.ಎನ್. ಆದೇಶಿಸಿದ್ದಾರೆ.
ಅಧ್ಯಕ್ಷರು, ಫೆಡರೇಶನ್ ಆಫ್ ವೈನ್ಸ್ ಮರ್ಚೆಂಟ್ಸ್ ಅಸೋಸಿಯೇಷನ್ ಚಿಕ್ಕಮಗಳೂರು ಜಿಲ್ಲಾ ಘಟಕವಾರು ಅಬಕಾರಿ ಇಲಾಖೆಗೆ ಸರ್ಕಾರವು ರಾಜಸ್ವ ಗುರಿಯನ್ನು ನೀಡಿದ್ದು ಸದರಿ ಗುರಿಯನ್ನು ಸನ್ನದುದಾರರಾದ ನಾವೇ ಮದ್ಯ ಮಾರಾಟದ ಮುಖಾಂತರ ಸಾಧಿಸಲು ಕ್ರಮ ವಹಿಸಬೇಕಾಗಿರುತ್ತದೆ. ಪದೇಪದೇ ಸನ್ನದುಗಳನ್ನು ಮುಚ್ಚುವುದರಿಂದ ಉದ್ಯಮಕ್ಕೂ ಹಾಗೂ ರಾಜಸ್ವ ಸಂಗ್ರಹಣೆಗೂ ಧಕ್ಕೆ ಉಂಟಾಗುವುದರೊಂದಿಗೆ ಸನ್ನದುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರುಗಳ ಜೀವನೋಪಾಯಕ್ಕೆ ತೊಂದರೆಯಾಗುತ್ತದೆ. ನಿಷೇಧದಿಂದಾಗಿ ಇಲಾಖೆ ನಿಗದಿಪಡಿಸಿದ ಮದ್ಯ ಬಳಕೆ ಗುರಿಯನ್ನು ಸಾಧಿಸಲು ಕಷ್ಟ ಸಾಧ್ಯವಾಗಿ ಸರ್ಕಾರದ ರಾಜಸ್ವಕ್ಕೂ ಹಾಗೂ ಉದ್ಯಮಕ್ಕೂ ನಷ್ಟ ಉಂಟಾಗುವುದರಿಂದ ಜಿಲ್ಲೆಯಲ್ಲಿ ಜೂನ್ 3 ರಂದು ಸಂಜೆ 5 ಗಂಟೆ ನಂತರ ಮದ್ಯ ಮಾರಾಟ ಮಾಡಲು ಮಾರ್ಪಾಡು ಆದೇಶ ಮಾಡಿ ವ್ಯಾಪಾರದ ಹಿತದೃಷ್ಟಿಯಿಂದ ಹಾಗೂ ರಾಜಸ್ವದ ಗುರಿಯನ್ನು ಸಾಧಿಸಲು ಅನುಕೂಲ ಆಗುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳು ತಿದ್ದುಪಡಿ ಆದೇಶ ಹೊರಡಿಸಿದ್ದಾರೆ.