ಕಡೂರು : ಕೋರ್ಟ್ (Court) ತೀರ್ಪಿನಿಂದ ಅಸಮಾಧಾನಗೊಂಡ ರೈತ (Farmer)ನೊಬ್ಬ ನ್ಯಾಯಾಲಯದ ಆವರಣ ಸಮೀಪವೇ ವಿಷ (Poison) ಸೇವಿಸಿ ಆತ್ಯಹತ್ಯೆಗೆ (Suicide) ಯತ್ನಿಸಿದ ಘಟನೆ ಕಡೂರು (Kadur) ಪಟ್ಟಣದಲ್ಲಿ ಶುಕ್ರವಾರ ನಡೆದಿದೆ.
ತಾಲೂಕಿನ ಕಾರೇಹಳ್ಳಿ ಗ್ರಾಮದ ಮಲ್ಲಿಕಾರ್ಜುನ (50) ಎಂಬಾತನೇ ಆತ್ಮಹತ್ಯೆಗೆ ಯತ್ನಿಸಿದ ರೈತ.
ಏನಿದು ಘಟನೆ ?
ಜಮೀನಿನ ವಿಚಾರದ ವ್ಯಾಜ್ಯ ಕಡೂರು ಸಿವಿಲ್ ಕೋರ್ಟ್ನಲ್ಲಿತ್ತು, ಪ್ರಕರಣದ ತೀರ್ಪು. ರೈತನ ವಿರುದ್ಧ ಬಂದಿತ್ತು. ತೀರ್ಪಿನ ವಿರುದ್ಧ ರೈತ ನ್ಯಾಯಾಲಯಕ್ಕೆ ಮೆಲ್ಮನವಿ ಸಲ್ಲಿಸಿದ್ದರು. ಶುಕ್ರವಾರ ಕಡೂರು ಪಟ್ಟಣದ ನ್ಯಾಯಾಲಯದಲ್ಲಿ ಇದರ ವಿಚಾರಣೆ ನಡೆದಿದ್ದು, ತೀರ್ಪು ರೈತ ಮಲ್ಲಿಕಾರ್ಜುನ ವಿರುದ್ಧ ಬಂದಿತ್ತು, ಇದರಿಂದ ಅಸಮಾಧಾನಗೊಂಡ ರೈತ ನನಗೆ ಅನ್ಯಾಯವಾಗಿದೆ ಎಂದು ನ್ಯಾಯಾಲಯದ ಆವರಣ ಸಮೀಪ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಕೂಡಲೇ ರೈತನನ್ನು ತಾಲೂಕು ಆಸ್ಪತ್ರೆಗೆ ಸೇರಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ವೈದ್ಯರ ಸಲಹೆ ಮೇರೆಗೆ ಹಾಸನ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಬಳಿಕ ರೈತ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ವಿಡಿಯೋದಲ್ಲೇನಿದೆ ?
ನನ್ನ ತಂದೆ ನಿಧನವಾದ ಬಳಿಕ ನನ್ನ ಜಮೀನು ಲಪಟಾಯಿಸಲು ನನ್ನ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ನಮ್ಮ ವಕೀಲರು ಕೂಡ ಇದರಲ್ಲಿ ಶಾಮೀಲು ಆಗಿದ್ದಾರೆ. ನನ್ನ ಸಾವಿಗೆ ಎಂಬಿ ಷಡಕ್ಷರಪ್ಪ ತಮ್ಮಂದಿರು, ಅವರ ಅಣ್ಣನ ಮಕ್ಕಳು ಮತ್ತು ರಾಜು ಕಾರಣ. ಅಮ್ಮ ನನ್ನ ಕ್ಷಮಿಸು, ನೀನು ಚೆನ್ನಾಗಿರು. ಕೈ, ಕಾಲು ಮುಗಿದರೂ ನ್ಯಾಯಾಲಯದಲ್ಲಿ ನನ್ನನ್ನು ಏನು ಕೇಳಲಿಲ್ಲ. ನಾನು ಜಮೀನು ಉಳಿಸಿಕೊಳ್ಳಲು 20 ಲಕ್ಷ ರೂ. ಸಾಲ ಮಾಡಿದ್ದೇನೆ. ನಾನು ಸಿಎಂ ಸಿದ್ದರಾಮಯ್ಯ ಮತ್ತು ಗೃಹ ಸಚಿವರಿಗೆ ಪತ್ರ ಬರೆದಿದ್ದೇನೆ. ಆದರೆ ನನ್ನ ಪತ್ರಕ್ಕೆ ಸ್ಪಂದಿಸಿಲ್ಲ. ಈ ಮೂಲಕ ಸಿಎಂ ಮತ್ತು ಗೃಹ ಸಚಿವರಲ್ಲಿ ಬೇಡಿಕೊಳ್ಳುವೆ ನನಗೆ ನ್ಯಾಯ ಒದಗಿಸಿಕೊಡಿ. ಈ ಔಷಧಿ ಕುಡಿದು ನ್ಯಾಯಾಲಯದಲ್ಲೇ ಸಾಯುತ್ತಿದ್ದೇನೆ ಎಂದು ಮಲ್ಲಿಕಾರ್ಜುನ್ ವಿಷ ಸೇವಿಸಿದ್ದಾನೆ.